ಬೇಲೂರು: ತಾಲ್ಲೂಕಿನ ಮುಗುಳುವಳ್ಳಿ ಮತ್ತು ಹಾರೋಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಜಮೀನನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಿ ಗ್ರಾಮಸ್ಥರ ಉಪಯೋಗಕ್ಕೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿ ಎರಡೂ ಗ್ರಾಮಗಳ ಜನ ಬುಧವಾರ ಜಮೀನಿನ ಬಳಿ ಪ್ರತಿಭಟನೆ ನಡೆಸಿದರು.
ಮುಗುಳುವಳ್ಳಿ ಗ್ರಾಮದ ಸರ್ವೆ ನಂ. 80ರಲ್ಲಿ 8.15 ಎಕರೆ ಮತ್ತು ಹಾರೋಹಳ್ಳಿ ಗ್ರಾಮದ ಸರ್ವೆ ನಂ. 15ರಲ್ಲಿರುವ 5.33 ಎಕರೆ ಜಮೀನನ್ನು ಹೊಸಳ್ಳಿ ರಾಜು (ಜಿ.ಪಂ. ಮಾಜಿ ಅಧ್ಯಕ್ಷೆ ಕಾಮಾಕ್ಷಿರಾಜು ಪತಿ) ಎಂಬುವವರು ಒತ್ತುವರಿ ಮಾಡಿದ್ದಾರೆ. ಇದನ್ನು ತೆರವುಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡಬೇಕೆಂದು ತಹಶೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಜಮೀನನ್ನು ತೆರವುಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಒತ್ತುವರಿ ಜಮೀನು ತೆರವುಗೊಳಿಸಲು ವಿಫಲವಾಗಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಸ್ಥಳಕ್ಕೆ ತಹಶೀಲ್ದಾರ್ ಬಂದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.
ಮುಗುಳುವಳ್ಳಿ ಗ್ರಾಮದ ಆನಂದ್ ‘ಮುಗುಳುವಳ್ಳಿ ಮತ್ತು ಹಾರೋಹಳ್ಳಿ ಗ್ರಾಮದಲ್ಲಿ ಎಲ್ಲ ಜಾತಿಗೆ ಸೇರಿದ ಬಡವರು ವಾಸವಾಗಿದ್ದಾರೆ. ಕೆಲವರಿಗೆ ಜಮೀನು ಇಲ್ಲವಾಗಿದೆ. ಜಾನುವಾರುಗಳಿಗೆ ಮೇಯಲು ಜಮೀನು ಇಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಗಮನಹರಿಸಿ ಜಮೀನು ತೆರವು ಮಾಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಹಮ್ಮದ್ ಶಫಿ, ಚನ್ನಯ್ಯ, ದಾಸಯ್ಯ, ಲತೇಶ್, ಹೇಮಾವತಿ, ರತ್ನಾ, ಪುಟ್ಟಮ್ಮ, ಪಾಲಾಕ್ಷ, ದೊಡ್ಡಯ್ಯ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.