ADVERTISEMENT

ಕರ್ನಾಟಕ ವೈಭವ ತೆರೆದಿಟ್ಟ ನೃತ್ಯ ರೂಪಕ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2017, 8:48 IST
Last Updated 2 ನವೆಂಬರ್ 2017, 8:48 IST
ಅರಸೀಕರೆ ಹಳೆ ಸರ್ಕಾರಿ ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ಹಿರಿಮೆ ಬಗ್ಗೆ ನಡೆಸಿಕೊಟ್ಟ ನೃತ್ಯ ರೂಪಕ ಜನರ ಗಮನ ಸೆಳೆಯಿತು
ಅರಸೀಕರೆ ಹಳೆ ಸರ್ಕಾರಿ ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ಹಿರಿಮೆ ಬಗ್ಗೆ ನಡೆಸಿಕೊಟ್ಟ ನೃತ್ಯ ರೂಪಕ ಜನರ ಗಮನ ಸೆಳೆಯಿತು   

ಅರಸೀಕೆರೆ: ರಾಜ್ಯೋತ್ಸವದ ಅಂಗವಾಗಿ ನಗರದ ಹಳೆ ಸರ್ಕಾರಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಲಾ ತಂಡಗಳ ಮೆರವಣಿಗೆ ಹಾಗೂ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಬುಧವಾರ ಸಾರ್ವಜನಿಕರ ಗಮನ ಸೆಳೆಯಿತು.

ತಾಯಿ ಭುವನೇಶ್ವರಿ ಮೂರ್ತಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ತಹಶೀಲ್ದಾರ್‌ ಎನ್‌.ವಿ. ನಟೇಶ್‌, ಡಿಎಸ್‌ಪಿ ತಿಪ್ಪಣ್ಣನವರ್‌ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ರಕ್ಷಕ ದಳ, ಎನ್‌.ಸಿ.ಸಿ, ಭಾರತ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸೇರಿದಂತೆ ವಿವಿಧ 16 ಶಾಲೆಗಳ ಮಕ್ಕಳು ಪಥ ಸಂಚಲನ ನಡೆಸಿದರು.

ADVERTISEMENT

ತಹಶೀಲ್ದಾರ್‌ ಎನ್‌.ವಿ. ನಟೇಶ್‌ ರಾಷ್ಟ್ರ ಧ್ವಜಾರೋಹಣ  ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಶಾಸಕ ಶಿವಲಿಂಗೇಗೌಡ ಮಾತನಾಡಿ, ‘ಕನ್ನಡ ನಾಡು ಉದಯವಾಗಿ 6 ದಶಕ ಕಳೆದರೂ ಕನ್ನಡ ಭಾಷೆ, ಸಂಕಷ್ಟಗಳಿಂದ ಮುಕ್ತವಾಗಿಲ್ಲ. ಭಾಷೆಯ ಅಸ್ತಿತ್ವಕ್ಕಾಗಿ ಸಾಹಿತಿಗಳು, ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ವಿಷಾದಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹನುಮಯ್ಯ, ಮೃತ್ಯುಂಜಯ, ವೀರಕ್ಕ ಕೆ.ನಾಗರತ್ನಮ್ಮ, ಸೋಮಶೇಖರನ್‌, ಶೇಖರ್‌ ಸಂಕೊಂಡನಹಳ್ಳಿ, ಸಂತೋಷ್‌, ಆದರ್ಶ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.

ನಂತರ ಶಾಲಾ ಮಕ್ಕಳು ನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ನೃತ್ಯ ಪ್ರದರ್ಶಿಸಿದರು. ಮೊದಲಿಗೆ ತರಳಬಾಳು ಅನುಭವ ಮಂಟಪ ಶಾಲಾ ಮಕ್ಕಳು ಕನ್ನಡ ನಾಡು ನುಡಿ ಹಿರಿಮೆ ಬಗ್ಗೆ ನಡೆಸಿಕೊಟ್ಟ ನೃತ್ಯ ರೂಪಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕನ್ನಿಕಾ ಎಚ್‌.ಪಿ.ಎಸ್‌ ಹಾಗೂ ಸೇವಾ ಸಂಕಲ್ಪ ಶಾಲೆಯ ಮಕ್ಕಳು ‘ಹಚ್ಚೇವು ಕನ್ನಡದ ದೀಪ’, ಬಸವರಾಜೇಂದ್ರ ಪ್ರೌಢಶಾಲೆ ವಿದ್ಯಾರ್ಥಿಗಳು ‘ಕನ್ನಡ ನಾಡಿನ ಜೀವನದಿ ಕಾವೇರಿ’ ಗಾಯನಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಟೇಲ್‌ ಶಿವಪ್ಪ, ಲೋಲಾಕ್ಷಮ್ಮ ಮಹದೇವಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಂಜುಳಾಬಾಯಿ, ನಗರಸಭಾ ಉಪಾಧ್ಯಕ್ಷ ಪಾರ್ಥಸಾರಥಿ, ಡಿಎಸ್‌ಪಿ ಸದಾನಂದ ತಿಪ್ಪಣ್ಣನವರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ ಕುಮಾರ್‌, ಕಾರ್ಯನಿರ್ವಹಕಾಧಿಕಾರಿ ಕೃಷ್ಣಮೂರ್ತಿ, ಪೌರಾಯುಕ್ತ ಪರಮೇಶ್ವರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.