ADVERTISEMENT

ಕಳಪೆ ಕಾಮಗಾರಿ ಆರೋಪ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 9:00 IST
Last Updated 17 ಮಾರ್ಚ್ 2011, 9:00 IST
ಕಳಪೆ ಕಾಮಗಾರಿ ಆರೋಪ: ಪರಿಶೀಲನೆ
ಕಳಪೆ ಕಾಮಗಾರಿ ಆರೋಪ: ಪರಿಶೀಲನೆ   

ಸಕಲೇಶಪುರ: 2010-11ನೇ ಸಾಲಿನ ಪ್ರಕೃತಿ ವಿಕೋಪ ಯೋಜನೆ ಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ತಾಲ್ಲೂಕಿನ ಹಲಸುಲಿಗೆ ಸಮೀಪದ ಕುದುರೆಹಳ್ಳ ಕಿರು ಸೇತುವೆ ದುರಸ್ತಿ ಕಾಮಗಾರಿಯಲ್ಲಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಜಿ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಅಂಜನ್‌ಕುಮಾರ್ ಮಂಗಳ ವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ತಾಂತ್ರಿಕ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿದ ಅವರು, ಕಿರು ಸೇತುವೆ ದುರಸ್ತಿ ಕಾಮಗಾರಿಯಲ್ಲಿ ಒಡೆದು ಹೋಗಿರುವ ಆರ್‌ಸಿಸಿ ಪೈಪುಗಳನ್ನು ಬಳಸಿರುವುದು, ಗುಣಮಟ್ಟವಿಲ್ಲದ ಕಾಮಗಾರಿ, ತಳಪಾಯ ಕಟ್ಟದೆ ಹರಿಯುವ ಹಳ್ಳದ ಮೇಲ್ಭಾಗದಲ್ಲಿ ಪೈಪುಗಳನ್ನು ಇಟ್ಟು ಸಿಮೆಂಟ್ ಪ್ಯಾಕಿಂಗ್ ಮಾಡಿರುವುದು, ಪೈಪಿನ ತಳದಲ್ಲಿಯೂ ಸಹ ನೀರು ಹರಿಯುತ್ತಿರುವುದು, ಮೂಲೆ ಮಟ್ಟ, ವಾಟರ್ ಲೆವೆಲ್, ಇಲ್ಲದೆ ಬೇಕಾಬಿಟ್ಟಿಯಾಗಿ ಮಾಡಿರುವ ಪೂರ್ಣ ಕಾಮಗಾರಿಯನ್ನು ಸುಮಾರು 30 ನಿಮಿಷಗಳ ಕಾಲ ವೀಕ್ಷಿಸಿದರು.

‘ಇಂತಹ ಕಳಪೆ ಕಾಮಗಾರಿಯಿಂದ ಇಲಾಖೆ ಅಧಿಕಾರಿಗಳೇ ತಲೆ ತಗ್ಗಿಸಬೇಕಾಗಿದೆ. ಸದರಿ ಕಾಮಗಾರಿ ಪ್ರಕೃತಿ ವಿಕೋಪ ಯೋಜನೆ ಅಡಿಯಲ್ಲಿ ಮಾಡಲಾಗುತ್ತಿದ್ದು, ಜಿ.ಪಂ. ಅನುದಾನಕ್ಕೇನಾದರೂ ಈ ಕಾಮಗಾರಿ ಒಳಪಟ್ಟಿದ್ದರೆ ಈ ಕ್ಷಣದಲ್ಲಿಯೇ ಸಂಬಂಧಿಸಿದ ಎಂಜಿನಿಯರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊ ಳ್ಳುತ್ತಿದ್ದೆ. ಕಾಮಗಾರಿಯನ್ನು ಒಮ್ಮೆ ಪರಿಶೀಲನೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ.
ಈ ಕಾಮಗಾರಿ ಜಿಲ್ಲಾಧಿಕಾರಿಗಳಿಗೆ ಒಳಪಟ್ಟಿರುವುದರಿಂದ ಎರಡು ದಿನಗಳಲ್ಲಿ ಈ ಕಿರು ಸೇತುವೆ ದುರಸ್ತಿ ಕಾಮಗಾರಿ ಗುಣಮಟ್ಟದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಕಳಿಸಿ ಅವರ ಗಮಕ್ಕೆ ತರಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.