ADVERTISEMENT

ಕಾಂಪೌಂಡ್ ಕಾಮಗಾರಿ ಕಳಪೆ: ಕರವೇ ತರಾಟೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 6:36 IST
Last Updated 4 ಜೂನ್ 2013, 6:36 IST

ಹಳೇಬೀಡು: ಹತ್ತಾರು ವರ್ಷದಿಂದ ನೆನೆಗುದಿಗೆ ಬಿದ್ದು, ಈಗ ಆರಂಭವಾಗಿರುವ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಕಾಂಪೌಂಡ್ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಕಾರ್ಯಕರ್ತರು ಕೆಲಸ ಸ್ಥಗಿತಗೊಳಿಸಿದ ಘಟನೆ ಸೋಮವಾರ ನಡೆಯಿತು.

ಕಾಂಪೌಂಡ್ ನಿರ್ಮಾಣಕ್ಕೆ ನಿರ್ದಿಷ್ಟ ಅಳತೆಯ ತಳಪಾಯ ಮಾಡಿಲ್ಲ. ಸೂಕ್ತ ಪ್ರಮಾಣದಲ್ಲಿ ಸಿಮೆಂಟ್ ಬಳಕೆ ಮಾಡುತ್ತಿಲ್ಲ. ನಿರ್ಮಿಸಿದ ಕಟ್ಟಡಕ್ಕೆ ಕ್ಯೂರಿಂಗ್ ಮಾಡದೆ ಗಾರೆ ಉದುರುವ ಸ್ಥಿತಿಯಲ್ಲಿದೆ. ಇದೇ ರೀತಿ ಕಾಮಗಾರಿ ಮುಂದುವರೆದರೆ ಕಾಂಪೌಂಡ್ ಬಹುಕಾಲ ಬಾಳಿಕೆ ಬರುವುದಿಲ್ಲ. ಇದು ಹಗಲು ದರೋಡೆಯಾಗಿದೆ ಎಂದು ಕರವೇ ಸದಸ್ಯರು ದೂರಿದರು.

ಹೊಯ್ಸಳ ದೇವಾಲಯ ಸ್ಥಳೀಯರು ಮಾತ್ರವಲ್ಲದೆ ವಿದೇಶದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಸಂಶೋಧಕರು ಹಾಗೂ ಇತಿಹಾಸಕಾರರಿಗೆ ಅಗತ್ಯವಿರುವ ಮಾಹಿತಿಯನ್ನು ಒಳಗೊಂಡಿದೆ. ಹೀಗಾಗಿ ಹೊಯ್ಸಳ ದೇವಾಲಯ ಮುಂದಿನ ಪೀಳಿಗೆಗೆ ಉಳಿಯಬೇಕಾಗಿದೆ. ಹೀಗಾಗಿ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಗುಣಮಟ್ಟದ ಕಾಮಗಾರಿ ನಿರ್ವಹಿಸುವ ಮುಖಾಂತರ ಸುರಕ್ಷತೆ ಕಾಪಾಡಬೇಕಾಗಿದೆ ಎಂದು ಕಾರ್ಯಕರ್ತರು ಆಗ್ರಹಿಸಿದರು.

ಕಾಮಗಾರಿಯ ಗುಣಮಟ್ಟದ ಬಗ್ಗೆ ಇಲಾಖೆಯ ಸಂರಕ್ಷಣಾ ಸಹಾಯಕ ಶರವಣ್ಣನ್ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಮಂಗಳವಾರ ಕಾಮಗಾರಿಯ ಪರಿಶೀಲನೆ ನಡೆಸಲಾಗುವುದು. ಸದ್ಯಕ್ಕೆ ಕಾಮಗಾರಿ ನಿಲ್ಲಿಸುತ್ತೇವೆ ಎಂದು ತಿಳಿಸಿದರು.ಕರವೇ ತಾಲ್ಲೂಕು ಉಪಾಧ್ಯಕ್ಷ ಸೀತಾರಾಮು, ಹೋಬಳಿ ಅಧ್ಯಕ್ಷ ಈಶ್ವರ್, ಉಪಾಧ್ಯಕ್ಷ ಎಚ್.ಆರ್. ಮಂಜುನಾಥ್, ಕುಮಾರಸ್ವಾಮಿ, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.