ಸಕಲೇಶಪುರ: ಕಾಡಾನೆ ದಾಳಿಗೆ ಸುಮಾರು 5 ಲಕ್ಷ ರೂಪಾಯಿ ಮೌಲ್ಯಕ್ಕೂ ಹೆಚ್ಚು ಬೆಳೆ ಹಾಗೂ ಆಸ್ತಿ ಪಾಸ್ತಿ ಹಾನಿಯಾಗಿರುವ ಘಟನೆ ತಾಲ್ಲೂಕಿನ ಕಾಡಮನೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಗ್ರಾಮದ ರೈತ ಬಾಲಕೃಷ್ಣ.ಜಿ.ಆರ್ ಅವರ ಕಾಫಿ ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿರುವ ಆನೆಗಳು, ಅವರ ತೋಟದಲ್ಲಿ ಬೆಳೆದು ಫಸಲು ನೀಡುತ್ತಿರುವ ಸುಮಾರು 300ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ನಾಶಪಡಿಸಿವೆ. ಭಾರಿ ಗಾತ್ರವುಳ್ಳ 6 ಬೈನೆ ಮರಗಳನ್ನು ಗಿಡಗಳ ಮೇಲೆ ಉರುಳಿಸಿದ್ದು, ಗಿಡಗಳು ರೆಂಬೆ, ಕೊಂಬೆ, ಬುಡ ಸಮೇತ ಮುರಿದು ಹೋಗಿವೆ. ಇವುಗಳು ಹೆಜ್ಜೆ ಇಟ್ಟಲ್ಲೆಲ್ಲಾ ಗಿಡಗಳು ನಾಶಗೊಂಡಿವೆ. ಶುಕ್ರವಾರ ಸಂಜೆ ಕೊಯ್ಲು ಮಾಡಿ ತೋಟದಲ್ಲಿಯೇ ಇಟ್ಟಿದ್ದ ಕಾಫಿ ಹಣ್ಣುಗಳನ್ನು ಚೀಲ ಸಮೇತ ಎತ್ತು ಎಸೆದಿರುವುದರಿಂದ ಹಣ್ಣುಗಳು ಮಣ್ಣಿನಲ್ಲಿ ಚೆಲ್ಲಿ ನಷ್ಟ ಉಂಟಾಗಿದೆ.
ಇದೇ ಗ್ರಾಮದ ಅಶೋಕಗೌಡ, ಚಂದ್ರಪ್ಪಗೌಡ ಅವರ ಕಾಫಿ ತೋಟ, ಹಾಗೂ ಬಾಳೆ ತೋಟಗಳಿಗೂ ಸಹ ನುಗ್ಗಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ.
ಈ ಗ್ರಾಮದಲ್ಲಿ ಸತತ 5 ವರ್ಷಗಳಿಂದ ಕಾಡಾನೆಗಳ ದಾಳಿ ನಿರಂತರವಾಗಿದ್ದು, ಕಷ್ಟಪಟ್ಟು ಬೆಳೆ ಬಳೆದಿರುವ ರೈತರು ಆನೆಗಳಿಂದ ಪ್ರಾಣ ಹಾನಿ ಹಾಗೂ ಬೆಳೆ, ಆಸ್ತಿ ಪಾಸ್ತಿ ಹಾನಿ ಎದುರಿಸುವಂತಾಗಿದೆ.
ಈ ಸಂಬಂಧ ವಲಯ ಅರಣ್ಯ ಅಧಿಕಾರಿ ಕಚೇರಿಗೆ ದೂರು ನೀಡಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.