ಹೆತ್ತೂರು: ಹೋಬಳಿಯ ಬಾಚಿಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಕಾಡಾನೆಗಳು ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆಯನ್ನು ನಾಶಪಡಿಸಿವೆ.
ಗ್ರಾಮದ ಹೂವಣ್ಣ, ನಾಗೇಶ್, ಎಂಬುವವರ ಜಮೀನಿಗೆ ನುಗ್ಗಿರುವ ಸುಮಾರು 5 ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆಯನ್ನು ನಷ್ಟಪಡಿಸಿವೆ. ವಾರದಿಂದ ಪಕ್ಕದ ಅರಣ್ಯದಲ್ಲಿ ಬೀಡುಬಿಟ್ಟಿರುವ ಆನೆಗಳು ರಾತ್ರಿ ಸಮಯಲ್ಲಿ ತೋಟ– ಗದ್ದೆಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿವೆ. ಗ್ರಾಮದ ವಸಂತ ಎಂಬುವವರ ತೋಟದಲ್ಲಿ ಕೃಷಿ ಪರಿಕರಗಳನ್ನು ಇಡಲು ಮಾಡಿದ ಗುಡಿಸಲನ್ನು ಸಂಪೂರ್ಣ ನಾಶಪಡಿಸಿವೆ.
ಸಮೀಪದ ಗ್ರಾಮಗಳಾದ ಹಾಡ್ಲ ಹಳ್ಳಿ, ಮೆಕ್ಕಿರಮನೆ, ಜಾತಹಳ್ಳಿ, ಬೂಬ್ಬನಹಳ್ಳಿ, ಹಳ್ಳಿಯೂರು ತೋಟ ಗಳಲ್ಲೂ ದಾಂಧಲೆ ನಡೆಸಿರುವ ಕಾಡಾನೆ ಹಿಂಡು ತೋಟದಲ್ಲಿದ್ದ ಬಾಳೆ, ಕಾಳು ಮೆಣಸು, ಅಡಿಕೆ ಗಿಡಗಳನ್ನು ತುಳಿದು ಹಾಕಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಲೆನಾಡಿನಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಅರಣ್ಯದಲ್ಲಿ ಆಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಕಾಡಾನೆಗಳು ನಾಡಿನತ್ತ ಮುಖಮಾಡುತ್ತಿವೆ. ಇದರ ಪರಿಣಾಮ ರೈತರ ಭತ್ತ, ಕಾಫಿ, ಬಾಳೆ, ಏಲಕ್ಕಿ, ಅಡಿಕೆ, ಶುಂಠಿ, ಬೆಳೆಗಳು ನಾಶವಾಗುತ್ತಿವೆ. ಕೆಲವೆಡೆ ಕಾಡಾನೆ ದಾಳಿಗೆ ಹಲವರು ಪ್ರಾಣ ಕಳೆದುಕೊಂಡಿದ್ದರೆ. ಹೆತ್ತೂರು- ಯಸಳೂರು ಹೋಬಳಿಯ ಕಾಗಿನಹರೆೆ, ಬಾಳೆಹಳ್ಳ, ಸಿಂಕೆರಿ, ಬಿಸ್ಲೆ, ಪಟ್ಲ, ಚಿನ್ನಹಳ್ಳಿ, ಶಿವನಹಳ್ಳಿ ಕೂಡಿಗೆ, ಕೂತ್ತಳ್ಳಿ, ಕೆರೂಡಿ, ಅತ್ತಿಗನಹಳ್ಳಿ, ಐಗೂರು ಭಾಗದಲ್ಲಿ ಕಾಡನೆಗಳ ಹಾವಳಿ ತೀರಾ ಮಿತಿ ಮೀರಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.