ADVERTISEMENT

ಕೃತಿ ರಚನೆಯಲ್ಲಿ ಜಾಗೃತಿ ಇರಲಿ: ಸೈಯದ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 8:35 IST
Last Updated 14 ಸೆಪ್ಟೆಂಬರ್ 2011, 8:35 IST

ಆಲೂರು: ಸಾಹಿತಿಗಳು ಕೃತಿ ರಚಿಸುವಾಗ ಜಾಗೃತರಾಗಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸೈಯದ್ ಶಹಾಬುದ್ದೀನ್ ತಿಳಿಸಿದರು.

ತಾಲ್ಲೂಕಿನ ರಾಯರಕೊಪ್ಪಲು ಗ್ರಾಮದ ಸಮುದಾಯ ಭವನದ ಹರಿಹಳ್ಳಿ ರಾಜಾರಾವ್ ವೇದಿಕೆಯಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಮೂರನೇ ಸಾಹಿತ್ಯ ಸಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಸಕ ಎಚ್.ಕೆ.ಕುಮಾರಸ್ವಾಮಿ ಸಮ್ಮೇಳನ ಉದ್ಘಾಟಿಸಿದರು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇರಬೇಕು. ಕನ್ನಡ ಭಾಷೆ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು ಎಂದರು.

ಸಮ್ಮೇಳನಧ್ಯಕ್ಷರನ್ನು ತೆರೆದ ರಥದಲ್ಲಿ ಮಗ್ಗೆ ಗ್ರಾಮದಿಂದ ರಾಯರಕೊಪ್ಪಲುವರೆಗೆ  ಮೆರವಣಿಗೆಯಲ್ಲಿ ಕರೆತರಲಾಯಿತು. ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಕಲ್ಯಾಣಪ್ಪ ಅವರು ಕನ್ನಡ ಧ್ವಜ ಹಸ್ತಾಂತರಿಸಿದರು.

ನಿವೃತ್ತ ಪ್ರಾಚಾರ್ಯರಾದ ಎಚ್.ಆರ್.ಮಂಜಪ್ಪ ಗೌಡರ ಸಂಪಾದಕತ್ವದಲ್ಲಿ ರಚನೆಯಾದ ಸ್ಮರಣ ಸಂಚಿಕೆಯನ್ನು ಬೇಲೂರು ಸಾಹಿತಿ ಡಾ.ರಾಜಶೇಖರ್ ಮಠಮತಿ ಬಿಡುಗಡೆಗೊಳಿಸಿ ಮಾತನಾಡಿದರು.

ಸಮ್ಮೇಳನದ ಮೆರವಣಿಗೆ ಮುನ್ನ ಕಾರಗೋಡು ಗ್ರಾ.ಪಂ.ಅಧ್ಯಕ್ಷ ಜಗದೀಶ್‌ರವರು ರಾಷ್ಟ್ರಧ್ವಜ, ತಾ.ಕ.ಸ.ಪ.ಅಧ್ಯಕ್ಷ ಪುಟ್ಟೇಗೌಡ ಕನ್ನಡ ಧ್ವಜಾರೋಹಣ ಮಾಡಿದರು.

ಮಧ್ಯಾಹ್ನ ಡಾ.ವಳಗರಹಳ್ಳಿ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಹಿರಿಯ ಸಾಹಿತಿಗಳಾದ ಜ.ಹೋ.ನಾರಾಯಣಸ್ವಾಮಿ, ಬೇಲೂರು ಕೃಷ್ಣಮೂರ್ತಿ, ಜಾನಪದ ಸಾಹಿತಿ ಡಾ.ಎಚ್.ಆರ್.ರಾಜೇಗೌಡ, ಮಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಮಿ ಉನ್ನೀಸ, ಜಿ.ಕ.ಸ.ಪ.ಅಧ್ಯಕ್ಷ ಉದಯರವಿ, ತಾ.ಪಂ.ಅಧ್ಯಕ್ಷೆ ರಾಧ, ಉಪಾಧ್ಯಕ್ಷ ಕೆ.ಎನ್.ಕಾಂತರಾಜ್, ಜಿ.ಪಂ.ಸದಸ್ಯ ಪುರುಷೋತ್ತಮ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.