ADVERTISEMENT

ಕೌಶಿಕ್ ಪೆಟ್ರೋಲ್ ಪ್ರಕರಣ:ಆರೋಪಿಗಳಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 10:25 IST
Last Updated 9 ಜೂನ್ 2011, 10:25 IST
ಕೌಶಿಕ್ ಪೆಟ್ರೋಲ್ ಪ್ರಕರಣ:ಆರೋಪಿಗಳಬಿಡುಗಡೆ
ಕೌಶಿಕ್ ಪೆಟ್ರೋಲ್ ಪ್ರಕರಣ:ಆರೋಪಿಗಳಬಿಡುಗಡೆ   

ಹಾಸನ:ನಗರದ ಕೌಶಿಕ್ ಪೆಟ್ರೋಲ್ ಪಂಪ್‌ನಲ್ಲಿ 2004ನಲ್ಲಿ ನಡೆದ ದರೋಡೆ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತ ರಾಗಿದ್ದ ಒಂಬತ್ತು ಆರೋಪಿಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದಾಗಿ ಬುಧವಾರ ಬಿಡುಗಡೆ ಮಾಡಲಾಗಿದೆ.

2004ರಲ್ಲಿ ಹಾಸನ ಬೈಪಾಸ್ ರಸ್ತೆಯಲ್ಲಿರುವ ಕೌಷಿಕ ಪೆಟ್ರೋಲ್‌ಪಂಪ್‌ನಲ್ಲಿ ರಾತ್ರಿ ಐದು ಮಂದಿಯನ್ನು ಕೊಲೆಮಾಡಿ ದರೋಡೆ ಮಾಡಲಾಗಿತ್ತು. ಈ ಪ್ರಕರಣ ಜಿಲ್ಲೆಯಲ್ಲಿ ಭಾರಿ ಸಂಚಲನ ಉಂಟು ಮಾಡಿತ್ತು.

ಪೊಲೀಸರಿಗೂ ಆರೋಪಿಗಳನ್ನು ಪತ್ತೆಮಾಡಲು ಸಾಧ್ಯವಾಗಿರಲಿಲ್ಲ. ಇದಾಗ 2007ರಲ್ಲಿ ಮತ್ತೆ ಬೂವನಹಳ್ಳಿ ಬೈಪಾಸ್ ರಸ್ತೆ ಸಮೀಪದ ಪೆಟ್ರೋಲ್‌ಪಂಪ್‌ನಲ್ಲಿ ದರೋಡೆ ನಡೆಯಿತು. ತನಿಖೆ ನಡೆಸಿದ್ದ ಪೊಲೀಸರು ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ 2007ರಲ್ಲಿ ಒಟ್ಟಾರೆ 12 ಮಂದಿಯನ್ನು ಬಂಧಿಸಿದ್ದರು. ಇವುಗಳಲ್ಲಿ ಹಲವರು ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಯುವಕರು.

ಸರಿಸುಮಾರು ಇದೇ ಸಮಯದಲ್ಲಿ ದಾವಣಗೆರೆ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳಲ್ಲೂ ಇಂಥದ್ದೇ ದರೋಡೆ ಪ್ರಕರಣಗಳು ನಡೆದಿದ್ದವು. ಎಲ್ಲ ಪ್ರಕರಣಗಳಲ್ಲೂ ಈ ತಂಡದ ಕೈವಾಡವಿದೆ ಎಂದು ಶಂಕಿಸಿ ದೂರು ದಾಖಲಿಸಲಾಗಿತ್ತು. ಬಂಧಿತರಲ್ಲಿ ಮೂವರನ್ನು ಹಿಂದೆಯೇ ಬಿಡುಗಡೆ ಮಾಡಿದ್ದರೂ ಉಳಿದವರನ್ನು ಜೈಲಿನಲ್ಲಿರಿಸಲಾಗಿತ್ತು.

ಸುದೀರ್ಘ ವಿಚಾರಣೆಯ ಬಳಿಕ ಈ ಯುವಕರ ವಿರುದ್ಧ ಸಾಕ್ಷ್ಯಾಧಾರಗಳಿಲ್ಲದ ಕಾರಣ ಅವರನ್ನು ಈ ಪ್ರಕರಣದಿಂದ ಖುಲಾಸೆ ಮಾಡಲಾಗಿದೆ.

ಆದರೆ ಚಿಕ್ಕಮಗಳೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲೂ ಇವರ ಹೆಸರು ಇರುವುದರಿಂದ ಈ ಆರೋಪಿಗಳನ್ನು ಅಲ್ಲಿಗೆ ಕರೆದೊಯ್ಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.