ADVERTISEMENT

ಗ್ಯಾಸ್ ರೀಫಿಲ್ಲಿಂಗ್ ಗೋದಾಮಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 9:00 IST
Last Updated 17 ಜುಲೈ 2012, 9:00 IST

ಹಾಸನ: ಅಕ್ರಮವಾಗಿ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಗೋದಾಮಿಗೆ ಬೆಂಕಿ ಹತ್ತಿಕೊಂಡು ಅನೇಕ ವಸ್ತುಗಳು ಸುಟ್ಟು ಕರಕಲಾದ ಘಟನೆ ನಗರದ ಹೊಸಲೈನ್ ರಸ್ತೆ ಪಕ್ಕದಲ್ಲಿ  ಸೋಮವಾರ ನಡೆದಿದೆ.

ಘಟನೆ ಸಂದರ್ಭದಲ್ಲಿ ಗೋದಾಮಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ.
ಹಲವು ವರ್ಷಗಳಿಂದ ಇಲ್ಲಿ ಸಿಲಿಂಡರ್ ರೀಫಿಲಿಂಗ್ ದಂಧೆ ನಡೆಸುತ್ತಿತ್ತು ಎನ್ನಲಾಗಿದ್ದು, ಸೋಮವಾರವೂ ರೀಫಿಲಿಂಗ್ ಮಾಡುತ್ತಿದ್ದಾಗ ಅಕಸ್ಮಾತ್  ಬೆಂಕಿ ಹತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಇಡೀ ಗೋದಾಮಿಗೆ ವ್ಯಾಪಿಸಿ ಒಳಗಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಗೋದಾಮು ಸಮೀಪದ ಮನೆಗಳಿಗೆ ಬೆಂಕಿ ವ್ಯಾಪಿಸದಂತೆ ತಡೆದರು. ಇದರಿಂದ ಹೆಚ್ಚಿನ ಅನಾಹುತವನ್ನು ತಪ್ಪಿಸಿದಂತಾಗಿದೆ.

ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿವೈಎಸ್‌ಪಿ ಯಡಾ ಮಾರ್ಟಿನ್ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು.

ಘಟನಾ ಸ್ಥಳದಿಂದ 21 ಖಾಲಿ ಸಿಲಿಂಡರ್‌ಗಳನ್ನು  ವಶಪಡಿಸಲಾಗಿದೆ. ಘಟನೆಗೆ ಕಾರಣರಾಗಿದ್ದ ಝುಲ್ಲು ಹಾಗೂ ಇಖ್ತಾರ್ ಎಂಬುವವರು ತಲೆ ಮರೆಸಿಕೊಂಡಿದ್ದಾರೆ. ಇವರಿಬ್ಬರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.