ಹಾಸನ: `ಜಿಲ್ಲೆಯಲ್ಲಿ ಮುಂಗಾರು ಸರಿಯಾಗಿ ಆಗದ ಕಾರಣ ಈ ಬಾರಿಯ ಬೆಳೆಗಳ ಇಳುವರಿ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ~ ಎಂದು ಕೃಷಿ ಅಧಿಕಾರಿ ಬಿ. ಶಿವರಾಜು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ. ಕುಮಾರ ನಾಯಕ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಬರ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ಈ ಬಾರಿ ಏಪ್ರಿಲ್ನಲ್ಲಿ ವಾಡಿಕೆಗಿಂತ ಮೂರುಪಟ್ಟು ಹೆಚ್ಚು ಮಳೆಯಾದರೆ ಜೂನ್ ತಿಂಗಳಲ್ಲಿ ಮೂರನೇ ಒಂದರಷ್ಟು ಮಾತ್ರ ಮಳೆಯಾಗಿದೆ.
ಕಳೆದ ಬಾರಿ 35 ಸಾವಿರ ಹೆಕ್ಟೇರ್ನಲ್ಲಿ ದ್ವಿದಳ ಧಾನ್ಯ ಬೆಳೆಯಲಾಗಿತ್ತು. ಈ ಬಾರಿ 48 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ. ಅದರಲ್ಲೂ ಅರಸೀಕೆರೆ, ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಹೆಚ್ಚು ಬಿತ್ತನೆ ಮಾಡಲಾಗಿದೆ. ಆದರೆ ಅಲ್ಲಿ ಮಳೆಯಾಗದೆ ಬೆಳೆ ಒಣಗುವ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ರೂ. 20ಕೋಟಿ ನೀಡುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮಳೆಯ ಸ್ಥಿತಿ ಇದೇ ರೀತಿ ಮುಂದುವರಿದರೆ ಜಿಲ್ಲೆಯಲ್ಲಿ ರೈತರಿಗೆ ಒಟ್ಟು 50 ರಿಂದ 60 ಕೋಟಿ ರೂಪಾಯಿ ನಷ್ಟ ಉಂಟಾಗಬಹುದು. ಗೊಬ್ಬರದ ಬೆಲೆಯೂ ಮೂರು ಪಟ್ಟು ಹೆಚ್ಚಿದ್ದು ಇನ್ನೊಂದು ಸಮಸ್ಯೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರ ನಾಯಕ `ರೈತರಿಗೆ ಜೈವಿಕ ಗೊಬ್ಬರ ಹೆಚ್ಚು ಉಪಯೋಗಿಸುವಂತೆ ಉತ್ತೇಜಿ ಸಬೇಕು~ ಎಂದು ಸೂಚಿಸಿದರು.ಈ ಬಾರಿ 15ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಐದು ಸಾವಿರ ಹೆಕ್ಟೇರ್ ಕಡಿಮೆ ಬಿತ್ತನೆಯಾಗಿದೆ~ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಶಕೀಲ್ ಅಹಮದ್ ತಿಳಿಸಿದರು.
`ಮಳೆಯ ಕೊರತೆಯಿಂದ ಬಿತ್ತನೆ ಮಾಡಿರುವ ಬೀಜದಲ್ಲೂ 8ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ನಶವಾಗಿದೆ ಎಂದೂ ಅವರು ಮಾಹಿತಿ ನೀಡಿದರು.ಟಿ.ಸಿ ಪೂರೈಕೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಸೆಸ್ಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಮೋಹನರಾಜ್, ಕುಡಿವ ನೀರು ಪೂರೈಸುವ ಪಂಪ್ಗಳಿಗೆ ಶೀಘ್ರದಲ್ಲೇ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರು.
ಹಾಸನ, ಅರಸೀಕರೆ, ಹೊಳೆ ನರಸೀಪುರ, ಹಾಗೂ ಚನ್ನರಾಯ ಪಟ್ಟಣದಲ್ಲಿ ಕಾರ್ಯಗಾರಗಳಿದ್ದರೂ ಚನ್ನರಾಯಪಟ್ಟಣದಲ್ಲಿ ಮಾತ್ರ ಟಿಸಿ ದುರಸ್ತಿ ಮಾಡಲಾಗುತ್ತಿದೆ ಎಂದರು. ಟಿ.ಸಿ ಪೂರೈಕೆಗೆ ಎರಡು ಕೋಟಿ ಬಿಡುಗಡೆಗೆ ಮಾಡುವಂತೆ ಜಿಲ್ಲಾಧಿಕಾರಿ ಉಸ್ತುವಾರಿ ಕಾರ್ಯ ದರ್ಶಿಗೆ ಮನವಿ ಮಾಡಿದರು.
`ಬರ ನಿರ್ವಾಹಣೆಗೆ ಬೇಕಾದಷ್ಟು ಹಣ ಇದೆ. ಈ ಸಂಬಂಧ ಲೋಕೋ ಪಯೋಗಿ ಇಲಾಖೆಗೆ 238 ಕಾಮಗಾ ರಿಗಳಿಗೆ ಅನುಮೋದನೆ ನೀಡಲಾಗಿದೆ. ಹಾಸನ ತಾಲ್ಲೂಕಿನಲ್ಲಿ ನೀಡಿದ್ದ 51 ಕಾಮಗಾರಿ ಪೈಕಿ 40 ಮುಗಿದಿವೆ. ಅದ ರಂತೆ ಅರಸೀಕೆರೆ ತಾಲ್ಲೂಕಿನ 155 ಕಾಮಗಾರಿ ಪೈಕಿ 106 ಮುಗಿ ದಿವೆ ಎಂದು ಲೋಕೋಪ ಯೋಗಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಟಿ. ಅಂಜನ್ಕುಮಾರ್, ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಅಮಿತ್ಸಿಂಗ್ ಉಪಸ್ಥಿತರಿದ್ದರು.
ಎಸ್ಸೆಸ್ಸೆಲ್ಸಿ ಫಲಿತಾಶಕ್ಕೆ ಹರ್ಷ
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಮೂರನೆ ಸ್ಥಾನಕ್ಕೆ ಏರಿರು ವುದಕ್ಕೆ ಹರ್ಷ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕುಮಾರ ನಾಯಕ್, `ನಾನು ಮುಂದಿನ ವರ್ಷದ ಫಲಿತಾಂಶ ತಿಳಿಯಲು ಕಾತುರನಾಗಿದ್ದೇನೆ. ಜಿಲ್ಲೆ ಮೊದಲ ಸ್ಥಾನಕ್ಕೆ ಏರುವುದೇ ಎಂಬುದನ್ನು ನೋಡಬೇಕು~ ಎಂದರು.
ಆಲೂಗೆಡ್ಡೆಗೆ ಪ್ಯಾಕೇಜ್ ಘೋಷಣೆ
ಹಾಸನ: ಜಿಲ್ಲೆಯ ಆಲೂಗೆಡ್ಡೆ ಬೆಳೆಗಾರರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದೆ.
ಪ್ರತಿ ಹೆಕ್ಟೇರ್ಗೆ 5 ಸಾವಿರ ರೂಪಾಯಿಯಂತೆ ಒಬ್ಬ ರೈತನಿಗೆ ಗರಿಷ್ಠ 2 ಹೆಕ್ಟೇರ್ಗೆ ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಕೀಲ್ ಅಹಮ್ಮದ್ ತಿಳಿಸಿದ್ದಾರೆ.
ಬಿತ್ತನೆ ಬೀಜದೊಂದಿಗೆ ರೈತರಿಗೆ ತಲಾ ಒಂದು ಸಾವಿರ ರೂಪಾಯಿ ಮೌಲ್ಯದ ಕೀಟನಾಶಕ ಹಾಗೂ ಶಿಲೀಂಧ್ರ ನಾಶಕಗಳನ್ನು ನೀಡಲಾಗಿದೆ. ಮುಂದೆ ಬೆಳೆವಿಮೆ ಹಾಗೂ ಸಾವಯವ ಗೊಬ್ಬರ ಖರೀದಿಗೆ ಪ್ರತಿ ಹೆಕ್ಟೇರ್ಗೆ (ಗರಿಷ್ಟ 2 ಹೆಕ್ಟೇರ್ಗೆ) ತಲಾ 1500 ರೂಪಾಯಿ ನೀಡಲಾಗುವುದು. ಈಗ ರೈತರೇ ಬೆಳೆ ವಿಮೆಯ ಕಂತನ್ನು ಕಟ್ಟಬೇಕಾಗುತ್ತದೆ.
ಅದನ್ನು ಬಳಿಕ ಸರ್ಕಾರ ಮರುಪಾವತಿ ಮಾಡುವುದು. ಅದರಂತೆ ರೈತರೇ ಸಾವಯವ ಗೊಬ್ಬರ ಖರೀದಿಸಿ ಹಾಕಬೇಕು. ಬಳಿಕ ಇಲಾಖೆಯ ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಹಣವನ್ನು ವಾಪಸ್ ನೀಡಲಾಗುವುದು. ಎಲ್ಲ ಸೇರಿ ಪ್ರತಿ ಹೆಕ್ಟೇರ್ಗೆ 5 ಸಾವಿರದಂತೆ ಗರಿಷ್ಠ ಹತ್ತು ಸಾವಿರ ರೂಪಾಯಿ ಪರಿಹಾರ ಒದಗಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.