ADVERTISEMENT

ಜೆಡಿಎಸ್ ‘ಎ’ ಟೀಮ್‌ ಆಗಿ ಸರ್ಕಾರ ರಚನೆ: ದೇವೇಗೌಡ

ಕಾಂಗ್ರೆಸ್‌ ವಿರುದ್ಧ ಸಂಸದ ಎಚ್‌.ಡಿ.ದೇವೇಗೌಡ ಗುಡುಗು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 11:33 IST
Last Updated 3 ಏಪ್ರಿಲ್ 2018, 11:33 IST

ಹಾಸನ: ‘ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸೋಲಿಸಿ ಜಾತ್ಯತೀತ ಜನತಾದಳ ‘ಎ’ ಟೀಂ ಆಗಿ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.ಜಿಲ್ಲಾ  ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಕಾಸ ಪರ್ವದಲ್ಲಿ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಅವರು ಜಿಲ್ಲೆಯ ಸ್ಥಳೀಯ ಸಮಸ್ಯೆಗಳಾದ ತೆಂಗು, ಅಡಿಕೆ, ಆಲೂಗೆಡ್ಡೆ, ಶುಂಠಿ ಬೆಳೆ ನಾಶಕ್ಕೆ ಪರಿಹಾರ ಹೇಳಲಿಲ್ಲ. ಸ್ಥಳೀಯ ನಾಯಕರ ಸಿದ್ದ ಭಾಷಣ ಓದಿಕೊಂಡು ಜಿಎಡಿಎಸ್‌ ಅನ್ನು ಟೀಕಿಸಿದ್ದಾರೆ’ ಎಂದು ಆಕ್ರೋಶ  ವ್ಯಕ್ತಪಡಿಸಿದರು.

‘ತಮ್ಮನ್ನು ಮುಖ್ಯಮಂತ್ರಿ ಹುದ್ದೆವರೆಗೂ ಬೆಳೆಸಿದ ಮಾತೃ ಪಕ್ಷ ಜನತಾದಳವನ್ನು ನಿರ್ನಾಮ ಮಾಡಲು ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಇದು ನೋವಿನ ಸಂಗತಿ. ನನ್ನ ಅಧಿಕಾರವಧಿಯಲ್ಲಿ ಎಲ್ಲ ವರ್ಗದ ಜನರಿಗೂ ಉದ್ಯೋಗ, ರಾಜಕೀಯ ಅಧಿಕಾರ ನೀಡಿದ್ದೇನೆ. ಜಿಲ್ಲೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ದ್ರೋಹವೆಸಗಿವೆ’ ಎಂದು ಆರೋಪಿಸಿದರು.

ಶಾಸಕ ಎಚ್‌.ಡಿ.ರೇವಣ್ಣ ಮಾತನಾಡಿ, 10 ವರ್ಷಗಳಿಂದ ಬಿಜೆಪಿ, ಕಾಂಗ್ರೆಸ್‌ ಸರ್ಕಾರ ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿವೆ. ಹಲವಾರು ಯೋಜನೆಗಳಿಗೆ ಅಡ್ಡಗಾಲು ಹಾಕಿವೆ. ಜೆಡಿಎಸ್‌ ಬಿಜೆಪಿಯ ‘ಬಿ’ ಟೀಮ್‌ ಎಂದು ಟೀಕಿಸುವ ಮುನ್ನ ಯುಪಿಎ ಸರ್ಕಾರದ ಅವಧಿಯಲ್ಲಿ ಯಾರ ಜತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರಿ ನಡೆಸಲಾಯಿತ ಎಂಬುದನ್ನು ತನ್ನ ತಾಯಿ ಸೋನಿಯಾ ಗಾಂಧಿ ಅವರನ್ನು ರಾಹುಲ್‌ ಗಾಂಧಿ ಕೇಳಲಿ’ ಎಂದು ತಿರುಗೇಟು ನೀಡಿದರು.

ADVERTISEMENT

ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್‌ ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ಕೇವಲ ರೈತರ ಸಾಲ ಮನ್ನಾ ಮಾತ್ರವಲ್ಲದೇ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಲಿದೆ. ವಿಧವೆಯರು, ವೃದ್ಧರು, ಅಂಗವಿಕಲರ ಮಾಸಿಕ ವೇತನವನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.

‘ಕಾಂಗ್ರೆಸ್‌ ಜಾಹೀರಾತಿನ ಸರ್ಕಾರವಾಗಿದೆ. ಜನರ ಸಾವಿರ ಕೋಟಿ ರೂಪಾಯಿ ತೆರಿಗೆ ಹಣವನ್ನು ಜಾಹೀರಾತಿಗೆ ಮೀಸಲಿಟ್ಟಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.