ಹಿರೀಸಾವೆ: ದೀಪಾವಳಿ ಹಬ್ಬದ ಪ್ರಯುಕ್ತ ಹೋಬಳಿಯ ಜಿನ್ನೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಭಕ್ತರ ಸಮ್ಮುಖದಲ್ಲಿ ಚನ್ನಕೇಶವ ಸ್ವಾಮಿಯ ಮೆರವಣಿಗೆ ನಡೆಯಿತು.
ನರಕ ಚತುರ್ದಶಿ ದಿನವಾದ ಬುಧವಾರ ದೇವರನ್ನು ಹೂವಿನಿಂದ ಅಲಂಕಾರ ಮಾಡಿ ಗ್ರಾಮದಲ್ಲಿರುವ ಲಕ್ಷ್ಮಿ ದೇವಾಲಯಕ್ಕೆ ಕರೆತರಲಾಯಿತು.
ದೀಪಾವಳಿ ಅಮಾವಾಸ್ಯೆ ದಿನ ಗುರವಾರ ಚನ್ನಕೇಶವ ದೇವರು ಗ್ರಾಮದಿಂದ ಹೊರಟಿತು. ದೇವರ ಭಕ್ತರಿರುವ ಯಾಳನಹಳ್ಳಿ, ಹಿರೀಸಾವೆ, ಚಿಕ್ಕೋನಹಳ್ಳಿ, ಬೂಕನ ಬೆಟ್ಟ ಗ್ರಾಮಗಳಲ್ಲಿ ಉತ್ಸವ ನಡೆಸಲಾಯಿತು.
ಬಲಿಪಾಡ್ಯಮಿಯ ದಿನದ ಶುಕ್ರವಾರ ಸಂಜೆ ಜಿನ್ನೇನಹಳ್ಳಿ ಗ್ರಾಮದ ಸಹೋದರ ಗ್ರಾಮವಾದ ಕಾವಲು ಬಾರೆಯಲ್ಲಿಯೂ ಚನ್ನಕೇಶವ ಸ್ವಾಮಿಯ ಮೆರವಣಿಗೆ ಮಾಡಲಾಯಿತು. ನಂತರ 20 ಅಡಿ ಎತ್ತರಕ್ಕೆ ಕಟ್ಟಿರುವ ನೀರಿನ ಕುಡಿಕೆ ಒಡೆಯುವುದು, 30 ಅಡಿ ಎತ್ತರದ ಎಣ್ಣೆ ಹಚ್ಚಿದ ಕಂಬವನ್ನು ಎರುವ ಜನಪದ ಶೈಲಿಯ ಆಟಗಳನ್ನು ಗ್ರಾಮದ ಯುವಕರು ಆಡಿ ರಂಜಿಸಿದರು.
ರಾತ್ರಿ ಜಿನ್ನೇನಹಳ್ಳಿಗೆ ದೇವರ ಮೂರ್ತಿಯನ್ನು ಕರೆತರಲಾಯಿತು. ಊರ ಮುಂದೆ ಇರುವ ಈಶ್ವರ ದೇವಸ್ಥಾನದಲ್ಲಿ ಮೊದಲ ಪೂಜೆ ಸಲ್ಲಿಸಿ, ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ದೇವರೊಂದಿಗೆ, ಭಾಗವಂತಿಕೆ ಹಾಡುಗಳನ್ನು ಹಾಡುವ ತಂಡ, ಕೋಡಂಗಿ ವೇಷಧಾರಿ ಮತ್ತು ನಗಾರಿ ಹೊತ್ತ ಬಸವಣ್ಣ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಶನಿವಾರ ಬೆಳಿಗ್ಗೆ ಪಡಿಅಕ್ಕಿ ಮತ್ತು ಹರಕೆ ತಿರಿಸುವ ಕಾರ್ಯಕ್ರಮ ನಡೆಯಿತು. ಮಹಿಳೆಯರು ಮತ್ತು ಮಕ್ಕಳು ಬಾಯಿಬೀಗದ ಹರಕೆಯಲ್ಲಿ ಭಾಗವಹಿಸಿದ್ದರು. ಚನ್ನಕೇಶವ ದೇವರನ್ನು ಶನಿವಾರ ಮಧ್ಯಾಹ್ನ ಮೂಲಸ್ಥಾನಕ್ಕೆ ಕರೆತಂದು, ಮಹಾಮಂಗಳಾರತಿ ಮಾಡುವ ಮೂಲಕ ದೀಪಾವಳಿ ಹಬ್ಬವನ್ನು ಗ್ರಾಮಸ್ಥರು ಮುಕ್ತಾಯಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.