ADVERTISEMENT

ದುರಸ್ತಿ ಕಾಣದ ನಾಲೆ ಏರಿ: ರೈತರು ಕಂಗಾಲು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 9:00 IST
Last Updated 11 ಮಾರ್ಚ್ 2011, 9:00 IST

ಸಾಲಿಗ್ರಾಮ: ಹೇಮಾವತಿ ಬಲದಂಡೆ ನಾಲೆಯ 8ನೇ ವಿತರಣಾ ಕಾಲುವೆಯ ಏರಿ ಒಡೆದು ತಿಂಗಳು ಕಳೆ ದರೂ ಎಂಜಿನಿಯರ್‌ಗಳು ದುರಸ್ತಿಗೆ ಕ್ರಮಕೈಗೊಂಡಿಲ್ಲ. ಇದರಿಂದಾಗಿ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ ಹೋಬಳಿ ದಡದಹಳ್ಳಿ ರೈತರು ಕಂಗಾಲಾಗಿದ್ದಾರೆ. ಕಾಲುವೆಯ 8ನೇ ವಿತರಣಾ ಕಾಲುವೆ ಏರಿ ಒಡೆದು ಜಮೀನಿನಲ್ಲಿ ನೀರು ಹರಿದು ಫಲವತ್ತಾದ ಮಣ್ಣು  ಕೊಚ್ಚಿ ಹೋಗಿದೆ. ಭೂಮಿ ಹದ ಮಾಡಿಕೊಂಡು ನೀರಿಗಾಗಿ ಕಾಯುತ್ತಿದ್ದ ರೈತರು ಕಾಲುವೆಯಲ್ಲಿ ನೀರು ಹರಿ ಯದೇ ಮಂಕಾಗಿದ್ದಾರೆ.

ಕಾಲುವೆಗೆ ನೀರು ಹರಿಸುವ ಮುನ್ನ ಎಂಜಿನಿಯರ್‌ಗಳು ಏರಿ ಸರ್ವೆ ಮಾಡಬೇಕು ಎಂಬ ನಿಯಮ ಇದೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರಿನ ಹೇಮಾವತಿ ಬಲದಂಡೆ ನಾಲೆ ಉಸ್ತುವಾರಿ ಎಂಜಿನಿಯರ್‌ಗಳು ನಿಯಮ ಪಾಲಿಸುತ್ತಿಲ್ಲ. ಏರಿ ಮೇಲೆ ಕಾಲಿಟ್ಟರೂ ಕುಸಿಯುವ ಸ್ಥಿತಿಯಲ್ಲಿದ್ದರೂ ಎಂಜಿನಿಯರ್‌ಗಳು ಕ್ರಮಕೈಗೊಂಡಿಲ್ಲ ಎನ್ನುವುದು ರೈತರ ಆಕ್ರೋಶ.

ಏರಿ ಒಡೆದಿರುವ ಬಗ್ಗೆ ದೂರವಾಣಿಯಲ್ಲಿ ಎಂಜಿನಿಯರ್‌ಗಳಿಗೆ ರೈತರು ತಿಳಿಸಿದ್ದಾರೆ. ‘ಕಾಮಗಾರಿಗೆ ಹಣವಿಲ್ಲ ಏರಿ ಒಡೆದ ಜಾಗಕ್ಕೆ ಮರಳು ಮೂಟೆಗಳನ್ನಿಟ್ಟುಕೊಳ್ಳಿ’ ಎಂದು ಎಂಜಿನಿಯರ್‌ಗಳು ಉತ್ತರಿಸಿದ್ದಾರೆ. ಈ ಉತ್ತರದಿಂದ ಬೇಸತ್ತಿರುವ ರೈತರು ಎಂಜಿನಿಯರ್‌ಗಳ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇಲ್ಲಿನ ಏರಿ ವರ್ಷದಲ್ಲಿ ಎರಡು ಬಾರಿ ಒಡೆಯುವುದು ಮೂಮೂಲು. ಪ್ರತಿ ಬಾರಿ ರೈತರು ಸ್ಥಳೀಯ  ಶಾಸಕ ಸಾ.ರಾ.ಮಹೇಶ್ ಬಳಿ ಹೋಗಿ ಮನವಿ ಮಾಡಿಕೊಂಡ ನಂತರ ಎಂಜಿನಿಯರ್‌ಗಳು ದುರಸ್ತಿಗೆ ಕ್ರಮಕೈಗೊಳ್ಳುವುದು ಎಂದು ರೈತರು ಆರೋಪಿಸಿದ್ದಾರೆ. 

ಏರಿ ಒಡೆದಿರುವ 8ನೇ ವಿತರಣಾ ಕಾಲುವೆ ಮುಂದಿನ ಭಾಗದ ಭೂಮಿ ಹದ ಮಾಡಿ ಕೊಂಡಿಕೊಂಡಿರುವ  ರೈತರು ನೀರಿಗಾಗಿ ಕಾಯುತ್ತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಎಂಜಿನಿಯರ್‌ಗಳು ಇತ್ತ ಗಮನಹರಿಸಿ ಏರಿ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎನ್ನುವುದು ರೈತರು ಆಗ್ರಹಿಸಿದ್ದಾರೆ. ಸಾಲಿಗ್ರಾಮ ಯಶವಂತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.