ಹಾಸನ: ‘ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಚುನಾವಣೆ ಮಾದರಿ ನೀತಿಸಂಹಿತೆಯನ್ನು ಜಾರಿಗೊಳಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಎಂ.ಸಿ.ಸಿ. ತಂಡದ ಮುಖ್ಯಸ್ಥರ ಸಭೆಯಲ್ಲಿ ಅವರು ಮಾತನಾಡಿದರು.
ನೀತಿಸಂಹಿತೆಯ ಜಾರಿ ಪ್ರಕ್ರಿಯೆ ಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಬಿರುಸುಗೊಳಿಸಿ ಎಂದು ಹೇಳಿದರು.ಗಡಿ ಭಾಗದಲ್ಲಿ ಚೆಕ್ ಪೋಸ್ಟ್ಗಳನ್ನು ಇನ್ನಷ್ಟು ಬಲಪಡಿಸಿ, ವಾಹನಗಳ ತಪಾಸಣೆ ಹೆಚ್ಚಿಸಬೇಕು. ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸಭೆ ಸಮಾರಂಭಗಳ ಮೇಲೆ ಹದ್ದಿನ ಕಣ್ಣಿರಿಸಿ. ಖರ್ಚು ವೆಚ್ಚ, ನೀಡುವ ಕೊಡುಗೆ, ಆಮಿಷ ಒಡ್ಡುವುದು ಇತ್ಯಾದಿ ಬೆಳವಣಿಗೆಗಳನ್ನು ಪರಿಶೀಲಿಸಬೇಕು. ಅಕ್ರಮ ಮದ್ಯ ಸಾಗಾಟ, ಮಾರಾಟ, ಹಣ ಹಂಚಿಕೆ, ಸಾಗಾಟ ಬಗ್ಗೆ ನಿಗಾವಹಿಸಿ ಎಂದು ನಿರ್ದೇಶನ ನೀಡಿದರು.ಕೆಲವು ಕ್ಷೇತ್ರಗಳು ವೆಚ್ಚದ ವಿಚಾರದಲ್ಲಿ ಸೂಕ್ಷ್ಮವಾಗಿವೆ. ಆಯಾಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು. ಅನುಮಾನಾಸ್ಪದ ಸ್ಥಿರವಾಗಿರುವ ಅಧಿಕಾರಿ, ಸಿಬ್ಬಂದಿಗಳ ಬಗ್ಗೆ ಕೂಡಲೇ ವರದಿ ಸಲ್ಲಿಸಿ ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿಗಳು ಗಸ್ತು ಚಟುವಟಿಕೆಯನ್ನು ಹೆಚ್ಚಿಸಿ ಅಕ್ರಮಗಳನ್ನು ಪತ್ತೆ ಹಚ್ಚಬೇಕು. ಇದಕ್ಕಾಗಿ ಹೆಚ್ಚಿನ ತಂಡಗಳನ್ನು ರಚಿಸಬೇಕು ಎಂದು ಹೇಳಿದರು.ಅಬಕಾರಿ ಉಪ ಆಯುಕ್ತ ಎಂ. ರವೀಂದ್ರ, ಉಪ ಆರಕ್ಷಕ ಅಧೀಕ್ಷಕ ಶಶಿಧರ್ ಹಾಗೂ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.