ADVERTISEMENT

ನೀರು ಸಮರ್ಪಕ ಪೂರೈಕೆಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 8:28 IST
Last Updated 9 ಜುಲೈ 2013, 8:28 IST

ಬಾಣಾವರ: ಪಟ್ಟಣದ 5ನೇ ವಾರ್ಡ್‌ಗೆಸ ಮರ್ಪಕವಾಗಿ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಜನ ಸೋಮವಾರ ಪ್ರತಿಭಟಿಸಿದರು.

ಹಲವಾರು ದಿನಗಳಿಂದ ನೀರು ಬರದಿದ್ದಕ್ಕೆ ಆಕ್ರೋಶಗೊಂಡ ಬಡಾವಣೆಯ ಮಹಿಳೆಯರು, ಪುರುಷರು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದರು.

ನಾಲ್ಕು ತಿಂಗಳಿಂದ ನಲ್ಲಿಯಲ್ಲಿ ನೀರು ಬಾರದೇ ಸಂಕಷ್ಟ ಪಡುತ್ತಿರುವ ಜನ ಟ್ಯಾಂಕರ್‌ವೊಂದಕ್ಕೆ 400-450 ರೂಪಾಯಿ ನೀಡಿ ಖರೀದಿ ಮಾಡುವಂತಾಗಿದೆ. ಬಡವರು ಸಹ ಕೊಡವೊಂದಕ್ಕೆ 3 ರೂಪಾಯಿ ತೆತ್ತು ನೀರು ಕುಡಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಶ್ವತ ಕುಡಿಯುವನೀರಿನ ಯೋಜನೆಗಾಗಿ ಹೇಮವತಿ ನದಿ ನೀರನ್ನು ಆದಷ್ಟು ಬೇಗ ಬಾಣಾವರಕ್ಕೆ ತರಿಸಲು ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಪ್ರತಿಭಟನಕಾರರು ಆಗ್ರಹಿಸಿದರು.
ನಂತರ ಕಂದಾಯ ಅಧಿಕಾರಿ ನಾಗಪ್ಪ ಮತ್ತು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಮೇಶ್ ಮಾತನಾಡಿ, ಈಗಾಗಲೇ ಪಟ್ಟಣದಲ್ಲಿ ಹೊಸದಾಗಿ 3 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಅವುಗಳಿಂದ ತ್ವರಿತವಾಗಿ ನೀರು ಸರಬರಾಜು ಮಾಡುತ್ತೇವೆಂದು ತಿಳಿಸಿದರು.

ಕೆಡಿಪಿ ಮಾಜಿ ಸದಸ್ಯ ಲಿಕ್ಮೀಚಂದ್, ಬಿ.ಎಸ್. ರವಿಕುಮಾರ್, ಬಿ.ಸಿ. ಗೌರೀಶ್, ನಿವೃತ್ತ ಅಧಿಕಾರಿ ರಾಮಕೃಷ್ಣಯ್ಯ, ಸತ್ಯನಾರಾಯಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ಜಯಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಸಿ. ಮಂಜುನಾಥ್, ಪುರಸಭೆ ಮಾಜಿ ಉಪಾಧ್ಯಕ್ಷ ಅಮೀರಹಮದ್, ಶಿವಲಿಂಗಪ್ಪ, ಯೋಗೇಶ್, ಲಕ್ಷ್ಮಿದೇವಿ, ಮಮತಾ, ರಾಜೇಶ್ವರಿ, ಶಾರದಮ್ಮ, ಲಕ್ಷ್ಮಮ್ಮ, ಶಕುಂತಲಾ, ನಿಂಗಮ್ಮ, ಇಲಿಯಾಜ್‌ಖಾನ್, ಫಾತಿಮಾ ಬಾನು, ಜಾಫರಷರೀಪ್, ಮುಕ್ತಾರಪಾಷ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.