ಶ್ರವಣಬೆಳಗೊಳ: ಮಹಾ ಮಸ್ತಕಾಭಿಷೇಕದ ಅಂಗವಾಗಿ ಹೋಬಳಿಯ ಹಳೇ ಬೆಳಗೊಳದಲ್ಲಿ ಗಂಗ ಹೊಯ್ಸಳರ ಕಾಲದ ಪ್ರಾಚೀನ ಪಾರ್ಶ್ವನಾಥ ಬಸದಿಯ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗಿದೆ.
ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಮೈಸೂರಿನ ರಾಜ್ಯ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರಾ ಇಲಾಖೆಯು ₹ 86 ಲಕ್ಷ ಅಂದಾಜು ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.
ಪಟ್ಟಣದ ಹೊರ ವಲಯದಲ್ಲಿ ಉತ್ತರಾಭಿಮುಖವಾಗಿ 5 ಕಿ,ಮೀ ಅಂತರದಲ್ಲಿರುವ ಈ ಜಿನ ಬಸದಿ 22 ಗುಂಟೆ ಪ್ರದೇಶದಲ್ಲಿ ನಿರ್ಮಾಣ ವಾಗುತ್ತಿದ್ದು, ಅದರ ಅಳತೆಯು 52 ಅಡಿ ಉದ್ದ ಮತ್ತು 20 ಅಡಿ ಅಗಲ ಹೊಂದಿದೆ. ಅದರಲ್ಲಿ 18 ಅಡಿ ಗರ್ಭಗುಡಿ, 24 ಅಡಿ ಪ್ರಾಂಗಣ ಮತ್ತು 10 ಅಡಿ ಮುಖ ಮಂಟಪ ಹೊಂದಿದೆ.
ಗುತ್ತಿಗೆದಾರರಾದ ಮೈಸೂರಿನ ಸುಭಾಷ್ ಕಂಪೆನಿ ಕಾರ್ಮಿಕರಾದ ಕಾಳಿದಾಸ, ಚಂದ್ರು, ‘ಹಳೆ ಹಾಸುಕಲ್ಲು ಗಳನ್ನು ಡ್ರೆಸ್ಸಿಂಗ್ ಜೋಡಿಸುವ ಕೆಲಸ ನಡೆಯುತ್ತಿದೆ. ಡಿಸೆಂಬರ್ ಒಳಗೆ ಪೂರ್ಣ ಆಗಲಿದೆ’ ಎಂದು ಹೇಳಿದರು.
‘ಈಗಾಗಲೇ 5 ಹಂತದ ಹಾಸು ಕಲ್ಲುಗಳನ್ನು ಜೋಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಮೊದಲ ಹಂತದಲ್ಲಿ ಆನೆಗಳು ಇರುವ ಚಿತ್ರಗಳು ತುಂಬಾ ಆಕರ್ಷಣೀಯವಾಗಿ ಕಾಣುತ್ತಿದೆ’ ಎಂದು ಸ್ಥಳೀಯ ನಿವಾಸಿ ಎಚ್.ಎನ್. ಲಕ್ಷ್ಮಣ್ ಸಂತಸ ವ್ಯಕ್ತಪಡಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.