ADVERTISEMENT

`ಪ್ರಗತಿ ಮಾಹಿತಿ ನೀಡಲು ಸೂಚನೆ'

ರೈತರು, ವಿದ್ಯಾರ್ಥಿಗಳಿಗೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 7:07 IST
Last Updated 8 ಜುಲೈ 2013, 7:07 IST

ಹಾಸನ: `ಜಿಲ್ಲೆಯಲ್ಲಿರುವ ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಸಹಕಾರ ಬ್ಯಾಂಕ್ ಅಧಿಕಾರಿಗಳ ಸಭೆ ಆಯೋಜಿಸಿ ರೈತರಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಾಲ ನೀಡುವ ಯೋಜನೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ' ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, `ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮರ್ಪಕ ಮಾಹಿತಿ ದೊರೆಯದ ಕಾರಣ ಒಂದು ವಾರ ಅಥವಾ ಹತ್ತು ದಿನದೊಳಗೆ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದರು.

`ರಾಜ್ಯ ಸರ್ಕಾರ ರೈತರ ಸಾಲ ಮರು ಪಾವತಿಗೆ ಹೆಚ್ಚಿನ ಗಡುವು ನೀಡಬೇಕು. ಕಬ್ಬು ಬೆಳೆಗಾರರಿಗೆ ಸಾಲ ಮರುಪಾವತಿ ಮಾಡಲು ಒಂದು ವರ್ಷ  ಕಾಲಾವಧಿ ನೀಡಲಾಗಿದ್ದು, ಇದರಂತೆ ಇತರ ರೈತರಿಗೂ ಅನುಕೂಲವಾಗುವಂತೆ ಹೆಚ್ಚು ಕಾಲಾವಕಾಶ ಮಾಡಿಕೊಡಬೇಕು ಎಂದರು.

ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ಗಂಡಸಿ ಹಾಗೂ ಜಾವಗಲ್ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು.

ಕಾಡಾನೆ ಸಮಸ್ಯೆ ಮಲೆನಾಡು ಭಾಗದಲ್ಲಿ ಹೆಚ್ಚಾಗುತ್ತಿದ್ದು, ಜನರು ತೀವ್ರ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡುಗಳಲ್ಲಿ ಮೇವು ಹಾಗೂ ಕುಡಿಯಲು ನೀರಿಲ್ಲದ ಕಾರಣ ಕಾಡಾನೆಗಳು ನಾಡಿನ ಕಡೆಗೆ ಬರುವಂತಾಗಿದೆ. ನಗರ ಬೆಳೆದಂತೆ ಕಾಡಿನ ವಿಸ್ತರಣೆ ಕಡಿಮೆಯಾಗುತ್ತಿದೆ. ಹಾಗಾಗಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ, ಅರಣ್ಯ ಸಚಿವರೊಂದಿಗೆ ಹಾಗೂ ಕೇಂದ್ರದ ಅರಣ್ಯ ಸಚಿವರೊಂದಿಗೆ ಶೀಘ್ರದಲ್ಲೇ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಲಾಗುವುದು' ಎಂದರು.

ಚುನಾವಣೆಗೆ ಸಿದ್ಧ: ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಪಕ್ಷಗಳು ತಾರಾತುರಿಯ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಜೆ.ಡಿ.ಎಸ್ ಸಹ ಸಿದ್ದತೆ ಆರಂಭಿಸಿದ್ದು, ಜುಲೈ 10 ರಿಂದ ಪ್ರತಿ ದಿನ ಎರಡೆರಡು ಲೋಕಸಭಾ ಕ್ಷೇತ್ರದ ಜೆ.ಡಿ.ಎಸ್. ಮುಖಂಡರಿಗೆ ಬೆಂಗಳೂರಿನಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗುವುದು ಎಂದರು.

ಬಡವರಿಗೆ ಒಂದು ರೂಪಾಯಿಗೆ ಅಕ್ಕಿ ನೀಡುವುದು ಉತ್ತಮ ಯೋಜನೆಯಾಗಿದ್ದು, ಲಕ್ಷಾಂತರ ಬಡವರಿಗೆ ಇದರಿಂದ ಅನುಕೂಲವಾಗ ಲಿದೆ. ಆದರೆ 10ರಂದು ನಡೆಯುವ ಕಾರ್ಯಕ್ರಮ ದಲ್ಲಿ ನಾನು ಪಾಲ್ಗೊಳ್ಳಲು ಆಗುತ್ತಿಲ್ಲ. ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗೆ ಜೆ.ಡಿ.ಎಸ್. ಬೆಂಬಲ ನೀಡಲಿದೆ' ಎಂದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವಾರಾಂ, ಶಾಸಕ ಎಚ್.ಎಸ್. ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.