ADVERTISEMENT

ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ: ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 7:05 IST
Last Updated 22 ಮಾರ್ಚ್ 2011, 7:05 IST

ಬೇಲೂರು: ಇಲ್ಲಿನ ಚೆನ್ನಕೇಶವಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಖರೀದಿಸಿರುವ ಜಾಗದಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕೈಗೊಂಡ ನಂತರ ಪ್ರವಾಸಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕೆಂದು ಪುರಸಭೆಯ ಸದಸ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಆಗ್ರಹಿಸಿದರು.

ಚೆನ್ನಕೇಶವ ದೇವಾಲಯದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಪಿ.ಜಿ.ನಟರಾಜ್, ಪ್ರವಾಸೋದ್ಯಮ ಇಲಾಖೆ ದೇವಸ್ಥಾನದ ಹಿಂಭಾಗ ಖರೀದಿ ಸಿರುವ ಜಾಗದಲ್ಲಿ ಏ. 1ರಿಂದ ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಬಸ್‌ಗಳಿಗೆ 40 ರೂ. ಮ್ಯಾಕ್ಸಿಕ್ಯಾಬ್‌ಗಳಿಗೆ 30 ರೂ. ಮತ್ತು ಕಾರುಗಳಿಗೆ 20 ರೂ. ಶುಲ್ಕ ವಿಧಿಸಲು ಜಿಲ್ಲಾಡಳಿತ ತೀರ್ಮಾನ ಕೈಗೊಂಡಿದೆ. ಮೊದಲ ಮೂರು ತಿಂಗಳು ಪ್ರಾಯೋಗಿಕವಾಗಿ ಜಿಲ್ಲಾಡಳಿತವೇ ಸಿಬ್ಬಂದಿಗಳ ಮೂಲಕ ಶುಲ್ಕ ಸಂಗ್ರಹಿಸಲಿದೆ.

ಹಿಂಭಾಗದ ಜಾಗವನ್ನು ಒಂದು ವಾರ ದಲ್ಲಿ ಸಮತಟ್ಟುಗೊಳಿಸಲಾಗುವುದು ಮತ್ತು ಒಂದು ವಾರದಲ್ಲಿ ಶೌಚಾಲಯ ನಿರ್ಮಾಣ ಕೆಲಸ ಆರಂಭಗೊಳ್ಳಲಿದೆ ಎಂದು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪುರಸಭೆ ಅಧ್ಯಕ್ಷ ಎಚ್.ಎಂ.ದಯಾನಂದ್, ಪಾರ್ಕಿಂಗ್ ಗುತ್ತಿಗೆದಾರರಿಂದ ಪ್ರವಾಸಿಗರಿಗೆ ಆಗುತ್ತಿದ್ದ ಕಿರುಕುಳವನ್ನು ತಪ್ಪಿಸುವ ಸಲುವಾಗಿ ಪುರಸಭೆ ಪಾರ್ಕಿಂಗ್ ಶುಲ್ಕ ವಸೂಲು ಮಾಡು ವುದನ್ನು ಕೈಬಿಟ್ಟಿದೆ. ಈಗ ಪುನಃ ಆರಂಭಿಸಿದರೆ ಪ್ರವಾಸಿಗರಿಗೆ ತೊಂದರೆಯಾಗಲಿದೆ. ಒಂದು ವೇಳೆ ಶುಲ್ಕ ವಸೂಲಿಗೆ ನಿರ್ಧಾರ ಕೈಗೊಂಡರೆ ಹಣವನ್ನು ಸಿಬ್ಬಂದಿಗಳು ದುರುಪಯೋಗ ಮಾಡುವುದನ್ನು ತಡೆಗಟ್ಟಲು ಟೋಲ್ ಸಂಗ್ರಹದ ಮಾದರಿಯಲ್ಲಿ ಕಂಪ್ಯೂಟರೀಕರಣಗೊಳಿಸಬೇಕು. ಪ್ರವಾಸಿಗರಿಗೆ ಅಗತ್ಯವಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ, ಪಾರ್ಕಿಂಗ್ ಜಾಗದಲ್ಲಿ ಡಾಂಬರೀಕರಣ ಮಾಡಿ ನಂತರ ಶುಲ್ಕ ವಸೂಲಿ ಮಾಡಲಿ, ಜೊತೆಗೆ ಪುರಸಭೆ ಶುಚಿತ್ವ, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ನಿರ್ವಹಣೆ ಮಾಡುವುದರಿಂದ ಬರುವ ಆದಾಯ ದಲ್ಲಿ ಶೇ. 50ರಷ್ಟನ್ನು ಪುರಸಭೆಗೆ ನೀಡಬೇಕೆಂದು ಒತ್ತಾಯಿಸಿದರು.

ಚೆನ್ನಕೇಶವ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಕೆ.ಕುಮಾರ್ ಮತ್ತು ಸುದರ್ಶನ್ ಮೂಲ ಸೌಕರ್ಯ ಕಲ್ಪಿಸದೆ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಈ ಎಲ್ಲ ವಿಷಯಗಳನ್ನು ಜಿಲ್ಲಾಧಿಕಾರಿ ಗಳ ಗಮನಕ್ಕೆ ತಂದು ಮುಂದಿನ ತೀರ್ಮಾನ ಕೈಗೊಳ್ಳು ವುದಾಗಿ ತಹಶೀಲ್ದಾರ್ ನಟರಾಜ್ ಸಭೆಗೆ ತಿಳಿಸಿದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಎಚ್.ಆರ್.ಸುಮಿತ್ರ, ಸದಸ್ಯರಾದ ತೊ.ಚ.ಅನಂತಸುಬ್ಬರಾಯ, ಬಿ.ಸಿ.ಮಂಜು ನಾಥ್, ಜಿ.ಶಾಂತಕುಮಾರ್, ಎಂ.ಗುರುಪಾದಸ್ವಾಮಿ, ಕೆ.ಎಸ್.ಶಿವಪ್ಪಶೆಟ್ಟಿ, ಜಯಶ್ರೀ, ರತ್ನ ಸತ್ಯನಾರಾಯಣ್, ಬಿ.ಎಲ್.ಧರ್ಮೇಗೌಡ, ಬಿ.ಎ.ಜಮಾಲುದ್ದೀನ್, ಮುಖ್ಯಾಧಿಕಾರಿ ಸುರೇಶ್ ಬಾಬು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕಟೇಗೌಡ, ವಿಜಯಲಕ್ಷ್ಮಿ, ಜಗದೀಶ್, ಸುಬ್ರಹ್ಮಣ್ಯ, ಕಾರ್ಯನಿರ್ವಾಹಕ ಅಧಿಕಾರಿ ನಿಂಗಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.