ADVERTISEMENT

ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 6:05 IST
Last Updated 27 ಸೆಪ್ಟೆಂಬರ್ 2011, 6:05 IST

ಅರಕಲಗೂಡು:  ಸಮಯಕ್ಕೆ ಸರಿಯಾಗಿ ಬಸ್‌ಗಳು ಬರದಿದ್ದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬಸ್‌ಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಘಟನೆ  ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆಯಿತು.

ಬೆಳಿಗ್ಗೆ 7 ರಿಂದ 8 ಗಂಟೆವರೆಗೆ ಹಾಸನ ಮಾರ್ಗವಾಗಿ ಒಂದೂ ಬಸ್ ಸಂಚರಿಸದ ಕಾರಣ ಕಾಯುತ್ತಿದ್ದ ನೂರಾರು ವಿದ್ಯಾರ್ಥಿಗಳು ರೊಚ್ಚಿಗೆದ್ದು  ಪ್ರತಿಭಟನೆಗೆ  ಮುಂದಾದರು. ಪ್ರತಿದಿನ ಹಾಸನಕ್ಕೆ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ.

ಬಸ್ ಬಂದರೂ  ಕೆಲವು ನಿರ್ವಾಹಕರು ಪಾಸ್ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಹತ್ತಿಸಿ ಕೊಳ್ಳುತ್ತಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ನಿರ್ವಾಹಕರು ಮತ್ತು ಚಾಲಕರು ವಿದ್ಯಾರ್ಥಿಗಳ ಆರೋಪವನ್ನು ತಳ್ಳಿ ಹಾಕಿ ಬಸ್ ನಿಲ್ದಾಣಕ್ಕೆ ಬರುವ ವಿದ್ಯಾರ್ಥಿಗಳು ಬರುವ ಬಸ್‌ಗೆ ಹತ್ತಿ ತೆರಳುವುದಿಲ್ಲ. ತಮ್ಮ ಸ್ನೇಹಿತರು, ಸಂಗಡಿಗರಿಗಾಗಿ ಕಾದು ಕುಳಿತಿರುತ್ತಾರೆ. ಅವರು ಬಂದ ನಂತರ ಒಂದೆ ಬಸ್‌ಗೆ ಎಲ್ಲರೂ ಹತ್ತುತ್ತಾರೆ ಇದರಿಂದ ನಮಗೆ ತೀವ್ರ ತೊಂದರೆಯಾಗುತ್ತಿದೆ.

ಪ್ರತಿದಿನ ನಮ್ಮ ರೂಟ್‌ನಲ್ಲಿ ಇಂತಿಷ್ಟು ಗಳಿಕೆ ತೋರಿಸಬೇಕು ಎಂಬ ನಿಯಮವನ್ನು ಸಂಸ್ಥೆ ಮಾಡಿದೆ. ಹೀಗಾಗಿ ಇತರ ಪ್ರಯಾಣಿಕರನ್ನು ಬಿಟ್ಟು ಪಾಸ್‌ನವರನ್ನೆ ಕರೆದೊಯ್ಯಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ನಮ್ಮ ಸಮಸ್ಯೆ ಅರ್ಥ ಮಾಡಿಕೊಂಡು ಎಲ್ಲ ಬಸ್‌ಗಳಲ್ಲಿ ಸ್ವಲ್ಪ ಸ್ವಲ್ಪ ಜನರಂತೆ ಪ್ರಯಾಣಿಸಲಿ ಎಂದರು.

ಘಟಕ ವ್ಯವಸ್ಥಾಪಕ ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿ ನಿಗದಿತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿ ಕೇವಲ ಒಂದು ಬಸ್‌ಗೆ ಎಲ್ಲ ವಿದ್ಯಾರ್ಥಿಗಳು ಹತ್ತದೆ ಎಲ್ಲ ಬಸ್‌ಗಳಲ್ಲಿ ಪ್ರಯಾಣಿಸುವಂತೆ ಸೂಚಿಸಿದರು. ಸಬ್‌ಇನ್ಸ್‌ಪೆಕ್ಟರ್ ಗೋಪಾಲ್ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಚದುರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT