ಹಾಸನ: `ಕಟ್ಟಡ ಕಾರ್ಮಿಕರಿಗೆ ಸರ್ಕಾರ ನೀಡುವ ಸೌಲಭ್ಯಗಳ ದುರ್ಬಳಕೆಯಾಗುತ್ತಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಹಲವು ಹೋರಾಟಗಳ ಬಳಿಕ 1996ರಲ್ಲಿ ಕೇಂದ್ರ ಸರ್ಕಾರ ಕಟ್ಟಡ ಕಾರ್ಮಿಕರ ಕಾಯ್ದೆ ಜಾರಿಗೆ ತಂದಿತು. 2006ರಲ್ಲಿ ರಾಜ್ಯ ಸರ್ಕಾರವೂ ನಿಯಮಾವಳಿ ರೂಪಿಸಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಿ 2007ರಿಂದ ಕಾರ್ಮಿಕರ ನೋಂದಣಿ ಆರಂಭಿಸಿತು. ಸರ್ಕಾರ ಕಾರ್ಮಿಕರಿಗೆ ನೀಡಿರುವ ಸೌಲಭ್ಯಗಳಿಂದ ಆಕರ್ಷಿತರಾದ ಇತರ ಕೆಲವರೂ ಈಗ ಹೆಸರು ನೋಂದಾಯಿಸಲು ಆರಂಭಿಸಿದ್ದಾರೆ' ಎಂದು ಪ್ರತಿಭಟನಾಕಾರರು ನುಡಿದರು.
ನೋಂದಣಿ ಮಾಡುವ ಜನರ ಸಂಖ್ಯೆ ಹೆಚ್ಚಾದ ಪರಿಣಾಮ ಈಗ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಮಾಲೀಕರು ಅಥವಾ ಗುತ್ತಿಗೆದಾರರ ಪ್ರಮಾಣಪತ್ರ ಪರಿಶೀಲಿಸುವಲ್ಲಿ ಮಂಡಳಿ ಉದಾಸೀನ ತೋರುತ್ತಿರುವ ಪರಿಣಾಮ ನಿಜವಾದ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ನೋಂದಣಿಗೆ ಒಟ್ಟಾರೆ ರೂ. 175 ಶುಲ್ಕ ಇದ್ದರೂ ಮಧ್ಯವರ್ತಿಗಳು 300ರಿಂದ ಸಾವಿರ ರೂಪಾಯಿ ವರೆಗೂ ಹಣ ಪಡೆಯುತ್ತಿದ್ದಾರೆ. ಇದನ್ನು ತಡೆಯಲು ಕಾರ್ಮಿಕ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಅದರಂತೆ ಆರ್.ಎಸ್.ಬಿ.ವೈ ಯೋಜನೆ ನಿಜವಾದ ಫಲಾನುಭವಿಗಳಿಗೇ ತಲುಪಿಸಬೇಕು ಎಂದು ಆಸ್ಪತ್ರೆಗಳಿಗೆ ಸೂಚನೆ ನೀಡಬೇಕು, ವೈದ್ಯಕೀಯ ಪರಿಹಾರ, ಶೈಕ್ಷಣಿಕ ಸಹಾಯಧನ, ಮದುವೆ ಇನ್ನಿತರ ವಿಚಾರಗಳಿಗಾಗಿ ಕಾರ್ಮಿಕರು ಸಲ್ಲಿಸಿದ ಅರ್ಜಿಗಳನ್ನು ಶೀಘ್ರವಾಗಿ ಪರಿಗಣಿಸಿ ಸಹಾಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರದ ಮಹಾರಾಜ ಪಾರ್ಕ್ ಮುಂದಿನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಕಾರ್ಮಿಕರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.