ಸಕಲೇಶಪುರ: ‘ನಮ್ಮ ದೇಶದಲ್ಲಿಯೇ 125 ಕೋಟಿ ಜನಸಂಖ್ಯೆ ಇದೆ. ಇವರೆಲ್ಲರ ಹೊಟ್ಟೆ ತುಂಬಿಸಿದ ಮೇಲೂ ಇಡೀ ಜಗತ್ತಿಗೆ ಆಹಾರ ಪೂರೈಕೆ ಮಾಡುವ ಇಲ್ಲಿನ ಮಣ್ಣಿನಲ್ಲಿದೆ’ ಎಂದು ‘ಇಸ್ರೊ’ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ಕುಮಾರ್ ಹೇಳಿದರು.
ಕಸಬಾ ಹೋಬಳಿ ಬೆಳೆಗಾರರ ಸಂಘದ 10ನೇ ವರ್ಷದ ಅಂಗವಾಗಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡ ಕೃಷಿ ವಿಚಾರ ಸಂಕಿರಣ, ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಕೃಷಿ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚು ಬಳಕೆ ಮಾಡುವ ಅಗತ್ಯವಿದೆ. ಜೊತೆಗೆ ರೈತರು, ಬೆಳೆಗಾರರು ಸಹ ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚು ಜ್ಞಾನ ಸಂಪಾದನೆ ಮಾಡಿದರೆ, ಕೃಷಿ ಕ್ಷೇತ್ರ ಆರ್ಥಿಕ ಶಕ್ತಿ ಪಡೆದುಕೊಳ್ಳಲಿದೆ’ ಎಂದರು.
‘ರೈತರು ಹಾಗೂ ವಿಜ್ಞಾನಿಗಳ ಮಧ್ಯೆ ಹೆಚ್ಚು ಸಂಪರ್ಕ ಬೆಳೆಸುವುದು ಇಂದು ಅಗತ್ಯ. ವಿಜ್ಞಾನಿಗಳು ಬಾಹ್ಯಾಕಾಶದಿಂದ ಮಾಹಿತಿ ಸಂಗ್ರಹಿಸುವುದು ಒಂದು ಮಾದರಿಯಾದರೆ; ಮಣ್ಣಿನಲ್ಲಿ ಬೆಳೆ ಬೆಳೆಯುವ ರೈತರದು ಇನ್ನೊಂದು ಮಾದರಿ ಜ್ಞಾನ. ಇವರಿಬ್ಬರೂ ಮಾಹಿತಿಯನ್ನು ವಿನಿಮಯ ಮಾಡಿಕೊಂಡಾಗ ಅಭಿವೃದ್ಧಿ ಸಾಧ್ಯ’ ಎಂದು ಸಲಹೆ ನೀಡಿದರು.
‘ಮಣ್ಣಿನ ಗುಣಮಟ್ಟ, ನೀರಿನ ಬಳಕೆ, ಹವಾಮಾನ ಬದಲಾವಣೆ ಮುನ್ನೆಚ್ಚರಿಕೆ ನೀಡುವ ಸಲುವಾಗಿ ಇಸ್ರೊ ವಿಜ್ಞಾನಿಗಳು ಸಾಕಷ್ಟು ಸಂಶೋಧನೆಯಲ್ಲಿ ತೊಡಗಿದ್ದಾರೆ. ಶೀಘ್ರದಲ್ಲಿ ಕೃಷಿಗೆ ಅನುಕೂಲ ಆಗುವಂತಹ ಮಾಹಿತಿ ನೀಡುವುದಾಗಿ’ ವಿಶ್ವಾಸ ವ್ಯಕ್ತಪಡಿಸಿದರು.
ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ಡಿ. ಪ್ರಸನ್ನಕುಮಾರ್, ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಜೈರಾಂ, ಮಾಜಿ ಅಧ್ಯಕ್ಷ ಡಾ. ಎನ್.ಕೆ. ಪ್ರದೀಪ್, ಪ್ರಧಾನ ಕಾರ್ಯದರ್ಶಿ ಯು.ಎಂ. ತೀರ್ಥಮಲ್ಲೇಶ್, ಉಪಾಧ್ಯಕ್ಷ ಡಾ.ಎಚ್್.ಟಿ. ಮೋಹನ್ಕುಮಾರ್, ಹಾಸನ ಜಿಲ್ಲಾ ಪ್ಲಾಂಟರ್್ಸ ಸಂಘದ ಅಧ್ಯಕ್ಷ ಸಿ.ಎಸ್. ಮಹೇಶ್, ಮಾಜಿ ಅಧ್ಯಕ್ಷ ಕೆ.ಬಿ. ಕೃಷ್ಣಪ್ಪ, ಗೌರವ ಕಾರ್ಯದರ್ಶಿ ಮುರುಳಿಧರ್ ಬಕ್ರವಳ್ಳಿ, ಜಂಟಿ ಕಾರ್ಯದರ್ಶಿ ಎಸ್.ಕೆ. ಸೂರ್ಯ, ನಿರ್ದೇಶಕ ಕೆ.ಎನ್. ಸದಾಶಿವ, ಕಾಫಿ ಮಂಡಳಿ ಸದಸ್ಯ ಎನ್.ಬಿ. ಉದಯ್ಕುಮಾರ್, ಪಿಆರ್ಎಫ್ ಅಧ್ಯಕ್ಷ ವೈ.ಎಸ್. ಗಿರೀಶ್ ಇದ್ದರು.
ಹೋಬಳಿ ಬೆಳೆಗಾರ ಸಂಘದ ಮಾಜಿ ಅಧ್ಯಕ್ಷ ಕ್ಯಾನಹಳ್ಳಿ ಸುಬ್ರಹ್ಮಣ್ಯ, ಹೆಗ್ಗದ್ದೆ ಉದಯ್ಕುಮಾರ್, ಟಿ.ಪಿ. ಸುರೇಂದ್ರ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.