ಹಿರೀಸಾವೆ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಪಡಿತರ ಚೀಟಿಯನ್ನು ವಿಳಾಸದ ಗುರುತಾಗಿ ಮತ್ತು ವಾಸ ಸ್ಥಳದ ದಾಖಲೆಯಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಹಶೀಲ್ದಾರ್ ನಟರಾಜು ಬುಧವಾರ ಹಿರೀಸಾವೆಯಲ್ಲಿ ಹೇಳಿದರು.
ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಬಾಲಕಿಯರ ಶಾಲೆಯಲ್ಲಿ ಏರ್ಪಡಿಸಿದ್ದ ಬೂತ್ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಅಕ್ಟೋಬರ್ 10 ರವರೆಗೆ ಹೊಸ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅವಕಾಶ ನೀಡಲಾಗಿದೆ.
ವಾಸ ಸ್ಥಳದ ಪ್ರಮಾಣ ಪತ್ರದ ಬದಲು ಪಡಿತರ ಚೀಟಿಯನ್ನು ದಾಖಲೆಯಾಗಿ ನೀಡಬಹುದು. ಆದರಲ್ಲಿ ಭಾವಚಿತ್ರ ಕಡ್ಡಾಯವಾಗಿ ಇರಬೇಕು. ಕಳೆದ ಬಾರಿ ಹಲವು ತಿದ್ದುಪಡಿಯಲ್ಲಿ ವ್ಯತ್ಯಾಸವಾಗಿದ್ದವರು ಪುನಃ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿ ಸೇರ್ಪಡೆ ಮಾಡಬೇಕು. ಕಳೆದ ಚುನಾವಣೆಯಲ್ಲಿ ಸೇರ್ಪಡೆಯಾದವರ ಗುರುತಿನ ಚೀಟಿಗಳನ್ನು ವಿತರಣೆ ಮಾಡಲು ತಾಂತ್ರಿಕ ತೊಂದರೆಯಾಗಿದ್ದು, ಮುಂದಿನ ತಿಂಗಳು ಗುರುತಿನ ಚೀಟಿಗಳನ್ನು ಬಿಎಲ್ಒ ಗಳ ಮೂಲಕ ವಿತರಣೆ ಮಾಡುವುದಾಗಿ ಹೇಳಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮನಾಥ್ ಮಾತನಾಡಿದರು. ಉಪ ತಹಶೀಲ್ದಾರ್ ಮೋಹನಕುಮಾರ್, ಕಂದಾಯ ವೃತ್ತ ನಿರೀಕ್ಷಕ ಸುಂಕದರಾಜ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಹೋಬಳಿಯ ಬಿಎಲ್ಒಗಳು ಸಭೆಯಲ್ಲಿ ಭಾಗವಹಿಸಿದ್ದರು. ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.