ADVERTISEMENT

ಮಳೆರಾಯನ ಮುನಿಸು: ಅನ್ನದಾತ ಆತಂಕ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 8:15 IST
Last Updated 19 ಜುಲೈ 2012, 8:15 IST
ಮಳೆರಾಯನ ಮುನಿಸು: ಅನ್ನದಾತ ಆತಂಕ
ಮಳೆರಾಯನ ಮುನಿಸು: ಅನ್ನದಾತ ಆತಂಕ   

ಹಳೇಬೀಡು: ಮೋಡ ಕಟ್ಟುತ್ತದೆ ಆದರೆ ಮಳೆ ಮಾತ್ರ ಭೂಮಿಗೆ ಮುಟ್ಟುವುದಿಲ್ಲ. ಉದುರಿದ ಮಳೆ ಭೂಮಿಯನ್ನು ತಂಪು ಮಾಡದೆ ಧಗೆ ಹೆಚ್ಚಾಗುತ್ತಿದೆ. ಈವರೆಗೂ ಕೈಕೊಟ್ಟ ಮಳೆರಾಯ ಇನ್ನಾದರೂ ದರ್ಶನ ನೀಡಿದರೆ ಜಾನುವಾರುಗಳನ್ನಾದರೂ ನೆಮ್ಮದಿಯಿಂದ ಸಾಕಬಹುದು ಎಂಬುದು ರೈತರ ಲೆಕ್ಕಾಚಾರ.

ಇದು ಹಳೇಬೀಡು ಸುತ್ತಮುತ್ತಲಿನ ಭಾಗದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಮಾಡದೆ ಮಳೆಗಾಗಿ ಕಾಯುತ್ತಿರುವ ಅನ್ನದಾತರ ಕೊರಗು.

ಏಪ್ರಿಲ್‌ನಲ್ಲಿ ಒಂದೇ ದಿನ ರುದ್ರನರ್ತನ ನಡೆಸಿ ರೈತರಿಗೆ ಮತ್ತೆ ಇತ್ತ ಮಳೆರಾಯ ಮುಖಮಾಡಿಲ್ಲ. ರೈತರು ಮುಗಿಲಿನತ್ತ ಮುಖ ಮಾಡಿದ್ದಾರೆ. ಏಪ್ರಿಲ್‌ನಲ್ಲಿ ಬಿದ್ದ ಮಳೆಗೆ ಭೂಮಿ ಹದ ಮಾಡಿಕೊಂಡು ಕೆಲವು ರೈತರು ಬಿತ್ತನೆ ಮಾಡಿದ್ದ ಜೋಳ, ಸೂರ್ಯಕಾಂತಿ, ಹತ್ತಿ ಹಾಗೂ ದ್ವಿದಳ ಧಾನ್ಯಗಳ ಬೆಳೆಗಳು ಕೈಗೆ ಸಿಗುವ ಲಕ್ಷಣಗಳು ಇಲ್ಲ.

ಕೆರೆ ಕಟ್ಟೆಗಳಲ್ಲಿ ಗುಂಡಿಗಳಲ್ಲಿದ್ದ ಅಲ್ಪಸ್ವಲ್ಪ ನೀರು ಸಹ ಬತ್ತಿದೆ. ಜಾನುವಾರುಗಳಿಗೆ ನೀರು ಕುಡಿಸಲು ಎಲ್ಲಿಗೆ ಹೋಗುವುದು. ತೇವಾಂಶವೇ ಇಲ್ಲದೇ ಭೂಮಿ ಬರಡಾಗಿರುವುದರಿಂದ ಜಾನುವಾರುಗಳಿಗೆ ಎಲ್ಲಿಂದ ಮೇವು ತರುವುದು ಎಂದು ರೈತರು ಪರಿತಪಿಸುತ್ತಿದ್ದಾರೆ. ಕಳೆದ ವರ್ಷ ಸಂಗ್ರಹಿಸಿದ ಒಣ ಮೇವು ಸಹ ಮುಗಿಯು ವ ಹಂತದಲ್ಲಿದೆ. 

 ಸಾಕಷ್ಟು ರೈತರು ಸಾಕಲಾರದೇ ಜಾನುವಾರುಗಳನ್ನು ಮಾರುತ್ತಿದ್ದಾರೆ. ಮೇವಿನ ಕೊರತೆಯಿಂದ ಗಟ್ಟಿಮುಟ್ಟಾದ ಜಾನುವಾರುಗಳು ಈಗ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ.  ಮಳೆ ಇಲ್ಲದೆ ಅಂತರ್ಜಲ ಪ್ರಮಾಣ ಪಾತಳಕ್ಕಿಳಿದಿದ್ದು, ಕೊಳವೆ ಬಾವಿಗಳು ಒಣಗುತ್ತಿವೆ. 500 ಅಡಿ ಕೊರೆಸಿದರೂ ಕೊಳವೆ ಬಾವಿಯಲ್ಲಿ ಹನಿ ನೀರು ಬರುತ್ತಿಲ್ಲ.

`ಈಗ ಸಮೃದ್ಧ ಮಳೆ ಸುರಿದರೂ ಒಣಗಿದ ಬೆಳೆಯಲ್ಲಿ ಫಸಲು ಬರುವುದಿಲ್ಲ.  ಕೆರೆ ಕಟ್ಟೆ ತುಂಬುವಂತಹ ಮಳೆ ಬಂದು ನಿಂತಿರುವ ಕೊಳವೆ ಬಾವಿಗಳಲ್ಲಿ ಜಲ ಬಂದರೆ ಮೇವು ಬೆಳೆದು ಜಾನುವಾರುಗಳನ್ನಾದರೂ ಸಾಕಿಕೊಂಡು ಜೀವನ ಸಾಗಿಸಬಹುದು ಎನ್ನುತ್ತಾರೆ ರೈತರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.