ADVERTISEMENT

ಮುಸ್ಲಿಂ ಒಳ ಮೀಸಲಾತಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 7:45 IST
Last Updated 17 ಏಪ್ರಿಲ್ 2012, 7:45 IST

ಸಕಲೇಶಪುರ: ಹಿಂದುಳಿದ ಜಾತಿ ವರ್ಗ-1(ಓಬಿಸಿ) 27%ರ ಮೀಸಲಾತಿ ಯಲ್ಲಿ ಮಸ್ಲಿಂ ಹಾಗೂ ಕ್ರೈಸ್ತರಿಗೆ ಶೇ.4.5 ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದು ದೇಶದ್ರೋಹದ ಕೆಲಸ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಸಕಲೇಶ್ವರಸ್ವಾಮಿ ದೇವಸ್ಥಾನ ಸಮೀಪದಿಂದ ತಾಲ್ಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಸೋನಿಯಾಗಾಂಧಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶದಲ್ಲಿ ಧರ್ಮ, ಜನಾಂಗಗಳನ್ನು ಎತ್ತಿಕಟ್ಟುವ ಮೂಲಕ ಪರಸ್ಪರ ದ್ವೇಶ, ಅಸಮಾನತೆ ಸೃಷ್ಟಿಮಾಡಿ ಅಧಿಕಾರಕ್ಕೆ ಏರುವ ನೀಚ ರಾಜಕಾರಣ ಮಾಡಲಾಗುತ್ತಿದೆ ಎಂದು ಬಜರಂಗದಳ ಸಂಚಾಲಕ ಎಸ್.ಎಲ್. ಧರ್ಮೇಶ್ ಹೇಳಿದರು.

ಕ್ರೈಸ್ತರು, ಮುಸ್ಲಿಂರ ಮನವೊಲಿಕೆಗೆ ದೇಶವನ್ನು ಒತ್ತೆ ಇಡಲಾಗುತ್ತಿದ್ದು, ಸರ್ಕಾರಿ ಸೌಲಭ್ಯಗಳಿಂದ ವಂಚಿತ ಗೊಳ್ಳುವ ಹಿಂದುಗಳು ಮುಂದೆ ಕ್ರೈಸ್ತ, ಇಸ್ಲಾಂ ಧರ್ಮಕ್ಕೆ ಮತಾಂತರ ಗೊಳ್ಳುವುದಕ್ಕೆ ಕೇಂದ್ರ ಸರ್ಕಾರ ಪ್ರೇರೇಪಿಸುತ್ತಿದೆ. ದೇಶದಲ್ಲಿ ಜೀವನ ನಡೆಸುತ್ತಿರುವ ವ್ಯಕ್ತಿಗಳು ಯಾವುದೇ ಧರ್ಮ, ಜಾತಿಗೆ ಸೇರಿರಲಿ ಅವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮೀಸಲಾತಿ ನೀಡುವುದರಿಂದ ಜಾತಿ, ಧರ್ಮಗಳ ನುಡುವೆ ಸಂಘರ್ಷ ಅಳಿಯುತ್ತದೆ. ಆದರೆ ಇಂತಹ ಮೀಸಲಾತಿಯ ಓಲೈಕೆಯಿಂದ ಯುಪಿ ಎ ಸರ್ಕಾರ ದೇಶದಲ್ಲಿ ಕೋಮು ಸೌಹಾರ್ದತೆ ಕದಡುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ವಿಎಚ್‌ಪಿ ತಾಲ್ಲೂಕು ಅಧ್ಯಕ್ಷ ಮುಖೇಶ್‌ಶೆಟ್ಟಿ, ಸಂಘಟನೆಯ ಮುಖಂಡರಾದ ರಾಘು, ವಿಜಯ್ ಇತರರು ಇದ್ದರು. ತಹಶೀಲ್ದಾರ್ ಚಂದ್ರಮ್ಮ ಅವರಿಗೆ ಮನವಿ ಸಲ್ಲಿಸಿದರು.

ಅರಸೀಕೆರೆ ವರದಿ: ಅಲ್ಪಸಂಖ್ಯಾತರ ಮತಗಳ ಓಲೈಕೆಗೆ ಯುಪಿಎ ಸರ್ಕಾರಿ ನೀಡಲು ಹೊರಟಿರುವ ಮುಸ್ಲಿಂ ಮೀಸಲಾತಿ ನೀತಿ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಪಟ್ಟಣದ ಪಿಪಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ವಿಶ್ವಹಿಂದೂ ಪರಿಷತ್‌ನ ಟಿ.ವಿ. ಅರುಣ್‌ಕುಮಾರ್, ಸಂಚಾಲಕ ನಾಗರಾಜ್ ಹೆಬ್ಬಾರ್, ಬಜರಂಗ ದಳದ ಅಧ್ಯಕ್ಷ ಸಂಪತ್‌ಕುಮಾರ್, ನಗರ ಅಧ್ಯಕ್ಷ ಸುಬ್ರಮಣಿ ಕಟ್ಟೆಹಳ್ಳಿ ನವೀನ್, ಆರ್‌ಎಸ್‌ಎಸ್ ಮುಖಂಡ ಕೆ.ಎನ್. ಸತ್ಯನಾರಾಯಣ, ಬೈರೇಶ್ ನೇತೃತ್ವದಲ್ಲಿ ಪಿಪಿ ವೃತ್ತದಲ್ಲಿ ಜಮಾ ಯಿಸಿದ ಕಾರ್ಯಕರ್ತರು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಶೇ 4.5 ಮುಸ್ಲಿಂ ಮೀಸಲಾತಿ ರದ್ದಾಗಲಿ, 27ರಷ್ಟು ಸಂಪೂರ್ಣ ಮೀಸಲಾತಿ ಹಿಂದುಳಿದ ವರ್ಗಕ್ಕೆ ಸಿಗಬೇಕು ಎಂದು ಆಗ್ರಹಿಸಿದರು.

ಟಿ.ವಿ. ಅರುಣ್‌ಕುಮಾರ್ ಮಾತನಾಡಿ, ಯುಪಿಎ ಸರ್ಕಾರ ಅಲ್ಪಸಂಖ್ಯಾತರ ಮತಗಳಿಗಾಗಿ ಹಿಂದುಳಿದ ವರ್ಗದವರ ಶೇ 27ರಷ್ಟು ಮೀಸಲಾತಿ ಕಸಿದುಕೊಳ್ಳುತ್ತಿದೆ. ಈ ನೀತಿ ಕೈಬಿಡಬೇಕು ಎಂದರು.

ಹಿಂದುಳಿದ ವರ್ಗಗಳಿಗೆ ಸಾರ್ವಜನಿಕ ಉದ್ದಿಮೆಗಳಲ್ಲಿ ಮೀಸಲಿಟ್ಟಿರುವ 70 ಸಾವಿರ ಹುದ್ದೆಗಳು ಸಹ ರದ್ದಾಗಲಿವೆ. ರಾಷ್ಟ್ರೀಕೃತ ಬ್ಯಾಂಕ್, ವಿಮಾ ಕ್ಷೇತ್ರದ 56 ಸಾವಿರ ಉದ್ಯೋಗಗಳು ಇನ್ನು ಹಿಂದುಳಿದ ವರ್ಗದವರಿಗೆ ಸಿಗುವುದಿಲ್ಲ. ಅವೆಲ್ಲವೂ ಮುಸ್ಲಿಂರ ಪಾಲಾಗಲಿವೆ ಎಂದು ಅವರು ಕಿಡಿಕಾರಿದರು.

ಪ್ರತಿಭಟನಾಕಾರರು ತಾಲ್ಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಉಪತಹಶೀಲ್ದಾರ್ ರಾಜಶೇಖರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.