ADVERTISEMENT

ರಾಸುಗಳ ಜಾತ್ರೆ: ನೀರಿಗಾಗಿ ಖಾಲಿ ಕೊಡ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 8:40 IST
Last Updated 11 ಜನವರಿ 2012, 8:40 IST

ಹಿರೀಸಾವೆ: ಹೋಬಳಿಯ ಬೂಕನ ಬೆಟ್ಟದ 81ನೇ ರಾಸುಗಳ ಜಾತ್ರೆಯಲ್ಲಿ ಸಮರ್ಪಕ ಕುಡಿಯುವ ನೀರಿಗೆ ಆಗ್ರಹಿಸಿ ಮಂಗಳವಾರ ರೈತರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮುಂದೆ ಕಾಲಿ ಕೊಡಗಳನ್ನು ಪ್ರದರ್ಶಿಸಿದರು.

ಎರಡು ದಿನಗಳಿಂದ ಜಾತ್ರೆ ನಡೆಯುತ್ತಿದ್ದು, ಮಂಗಳವಾರ ಬೆಳಗ್ಗೆ 11 ಗಂಟೆಗೆ ಜಾನುವಾರುಗಳಿಗೆ ನೀರು ದೊರೆಯದ್ದಿದ್ದಾಗ, ರೈತರು ಕೃಷಿ ಮೇಳದ ಉದ್ಘಾಟನ ಕಾರ್ಯಕ್ರಮದ ವೇದಿಕೆ ಬಳಿ ಬಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು. ಎರಡು ದಿನಗಳಿಂದ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಜಾನುವಾರುಗಳಿಗೆ ಅಗತ್ಯವಿರು ವಷ್ಟು ನೀರು ಸಿಗುತ್ತಿಲ್ಲ, ಎಲ್ಲರು ಕಾರ್ಯಕ್ರಮ ಮತ್ತು ಅಕ್ರಮ ಚಟುವಟಿಕೆಗಳ ಬಗ್ಗೆ ಗಮನಹರಿಸಿ ದ್ದಾರೆಯೇ ಹೊರತು, ರೈತರ ಸಮಸ್ಯೆ ಳ ಬಗ್ಗೆ ಯಾರು ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವಸ್ಥಾನ ನಿರ್ಮಾಣ ಸಮಿತಿಯ ಎಚ್.ಎಸ್.ಶ್ರೀಕಂಠಪ್ಪ ಮಾತನಾಡಿ, ನಾಲ್ಕು ಸಾವಿರ ಜಾನುವಾರುಗಳಿಗೆ ಏಕ ಕಾಲದಲ್ಲಿ ನೀರು ಒದಗಿಸುವುದು ಕಷ್ಟ. ಸಾಧ್ಯವಾದಷ್ಟು ನೀರು ನೀಡುತ್ತಿದ್ದೇವೆ, ರೈತರು ಅಧಿಕಾರಿಗಳೊಂದಿಗೆ ಸಹಕರಿಸ ಬೇಕು,  ತಕ್ಷಣವೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದರು.

ಇದಕ್ಕೂ ಮುನ್ನ ನಡೆದ ಕೃಷಿ ಮೇಳದ ಉದ್ಘಾಟನಾ ಕಾರ್ಯಕ್ರಮ ದಲ್ಲಿ  ಹಾಸನ ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಡಿ.ಕಿಶೋರ್, ಮಾಜಿ ಸದಸ್ಯ ಎಂ.ಕೆ.ಮಂಜೇಗೌಡ, ತಹಶೀಲ್ದಾರ್ ಬಿ.ಎನ್.ವರಪ್ರಸಾದ್‌ರೆಡ್ಡಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಕೃಷ್ಣ, ಎಪಿಎಂಸಿ ಅಧ್ಯಕ್ಷ ಕೆ.ಬಿ.ಉದಯಕುಮಾರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. 
ಕಂದಾಯ ವೃತ್ತ ನಿರೀಕ್ಷಕರಾದ ರಾಮಶೆಟ್ಟಿರ ಸ್ವಾಗತಿಸಿ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.