ಸಕಲೇಶಪುರ: ತಾಲ್ಲೂಕಿನ ವಡೂರು ಗ್ರಾಮದ ಬೆಂಡೇಕಾಡಿನಲ್ಲಿ ಗುರುವಾರ ಮಧ್ಯಾಹ್ನ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತೊಂದು ಕಾಡಾನೆ ಸೆರೆಹಿಡಿದರು. ಸುಮಾರು 22 ವರ್ಷ ವಯಸ್ಸಿನ ಕಾಡಾನೆಗೆ ಮೂರು ಬಾರಿ ಅರಿವಳಿಕೆ ಚುಚ್ಚುಮದ್ದು ಹಾರಿಸಿದರೂ ಕಾಡಾನೆಯೂ ಪ್ರಜ್ಞೆತಪ್ಪಿ ನೆಲಕ್ಕೆ ಉರುಳಲಿಲ್ಲ.
ಕೊನೆಗೆ ನಿಂತ ಸ್ಥಿತಿಯಲ್ಲಿಯೇ ಪ್ರಜ್ಞೆ ತಪ್ಪಿದೆ ಎಂಬುದನ್ನು ಖಾತರಿಪಡಿಸಿಕೊಂಡ ಅಧಿಕಾರಿಗಳ ಸೂಚನೆ ಆಧರಿಸಿ ಕಾರ್ಯಾಚರಣೆಗೆ ಬಳಸಲಾಗಿದ್ದ ಕುಮ್ಮಿ ಆನೆಗಳ ನೆರವಿನಿಂದ ಹಗ್ಗ ಕಟ್ಟಿ ಸೆರೆಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿಯಾದರು. ಸೆರೆಹಿಡಿಯಲಾದ ಆನೆಯನ್ನು ಸಕ್ಕರೆಬೈಲು ಆನೆ ಶಿಬಿರಕ್ಕೆ ಕಳಿಸಲಾಯಿತು.
ಕಾರ್ಯಾಚರಣೆಯಲ್ಲಿ ಬಂಡೀಪುರದ ಅಭಯಾರಣ್ಯದ ಡಾ. ನಾಗರಾಜ್, ನಾಗರಹೊಳೆ ಆನೆಧಾಮದ ಡಾ. ಮುಜೀಬ್, ಶಿವಮೊಗ್ಗದ ವಿನಯ್ಕುಮಾರ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ.ಸಿಂಹ, ಡಿಎಫ್ಒ ಮಂಜುನಾಥ್, ಎಸಿಎಫ್ ಲಿಂಗರಾಜ್, ವಲಯ ಅರಣ್ಯ ಅಧಿಕಾರಿ ಮೋಹನ್, ಯಸಳೂರು ವಲಯ ಅಧಿಕಾರಿ ಅಭಿಲಾಷ್ ಇದ್ದರು. ತಾತ್ಕಾಲಿಕವಾಗಿ ಎರಡು ಕಾಡಾನೆ ಹಿಡಿಯಲು ಸರ್ಕಾರ ಆದೇಶಿಸಿತ್ತು. ಅದರಂತೆ ಅರಣ್ಯ ಇಲಾಖೆ ಎರಡು ಕಾಡಾನೆ ಹಿಡಿದು ಆನೆ ಶಿಬಿರಕ್ಕೆ ಕಳುಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.