ADVERTISEMENT

ವೈಭವದ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 6:20 IST
Last Updated 8 ಮಾರ್ಚ್ 2012, 6:20 IST
ವೈಭವದ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ
ವೈಭವದ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ   

ಹಳೇಬೀಡು: ಉರಿಯುತ್ತಿದ್ದ ಬಿಸಿಲಿನಲ್ಲಿಯೂ ಪುಷ್ಪಗಿರಿಯಲ್ಲಿ ಮಲ್ಲಿಕಾರ್ಜುನಾ ಸ್ವಾಮಿ ರಥೋತ್ಸವ ಬುಧವಾರ ಅತ್ಯಂತ ವೈಭವದಿಂದ ನಡೆಯಿತು.

ನೆತ್ತಿ ಸುಡುವ ಬಿಸಿಲಿನಲ್ಲಿಯೂ ಭಕ್ತರು ಮುಗಿಲು ಮುಟ್ಟುವಂತೆ ಜಯಘೋಷ ಹಾಕಿದರೆ, ವಿಪ್ರರ ವೇದ ಮಂತ್ರ ಘೋಷಗಳು ಮುಗಿಲು ಮುಟ್ಟಿದವು. ಮಂಗಳವಾರದಿಂದ ದೇವಾಲಯದಲ್ಲಿ ವಿಶೇಷ ಪೂಜೆ ಆರಂಭವಾದವು. ರಾತ್ರಿ ಗಿರಿಜಾ ಕಲ್ಯಾಣ ನಡೆಯಿತು.

ಬುಧವಾರ ಬೆಳಿಗ್ಗೆ ಕೊಮಾರ‌್ನಹಳ್ಳಿ ಭಕ್ತರ ಸೇವೆಯಿಂದ ಉಯ್ಯಾಲೆ ಉತ್ಸವ ನಡೆಯಿತು. ನಂತರ ಗರ್ಭಗುಡಿಯಲ್ಲಿ ಅಭಿಷೇಕ, ಮಹಾಮಂಗಳಾರತಿ, ಅಲಂಕಾರ ಸೇವೆ ಏರ್ಪಡಿಸಲಾಗಿತ್ತು. ಪಾರ್ವತಿ ಪರಮೇಶ್ವರರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ ಸುತ್ತ ಮೆರವಣಿಗೆ ಮಾಡಲಾಯಿತು. ಹುಲಿಕೆರೆ ದಿ. ಕೆಂಪವೀರಾಚಾರ್ ವಂಶಸ್ಥರು ರಥಕ್ಕೆ ಕಳಸ ಪ್ರತಿಷ್ಠಾಪಿಸಿದರು. ನಂತರ ಉತ್ಸವ ಮೂರ್ತಿ ಯನ್ನು ರಥದಲ್ಲಿ ಆರೋಹಣ ಮಾಡಲಾಯಿತು. ಬಲಿ ಪೂಜೆ ನೆರವೇರಿಸಿ ಗೊನೆಬಿಟ್ಟ ಬಾಳೆಗಿಡವನ್ನು ಕತ್ತರಿಸಿದ ನಂತರ ಭಕ್ತರು ಭಕ್ತಿ ಭಾವದಿಂದ ರಥ ಎಳೆದು ಪನೀತರಾದರು. ರಥಕ್ಕೆ ಬಾಳೆಹಣ್ಣು ಎಸೆದು, ತೆಂಗಿನಕಾಯಿ ಒಡೆಯುತ್ತ ಭಕ್ತರು ಮಲ್ಲಿಕಾರ್ಜುನಾ ಸ್ವಾಮಿಗೆ ಶರಣು ಎಂದರು.

ಹಿಂದಿನಿಂದ ನಡೆದು ಬಂದ ಸಂಪ್ರದಾಯದಂತೆ ಶ್ಯಾನಭೋಗ ವಂಶಸ್ಥರಾದ ಹರುಬಿಹಳ್ಳಿ ಗೋಪಾಲಯ್ಯನವರು, ತಟ್ಟೆಹಳ್ಳಿಯ ಸೂರ್ಯನಾರಾಯಣ ಹಾಗೂ ರಮೇಶ್, ಹಳೇಬೀಡಿನ ಕೃಷ್ಣಮೂರ್ತಿ ಸಹೋದರರ ಸೇವೆಯಲ್ಲಿ ರಥೋತ್ಸವ ನಡೆಯಿತು. ಹಳೇಬೀಡು, ಘಟ್ಟದಹಳ್ಳಿ, ಮತಿಘಟ್ಟ ಬೇಲೂರು ಬ್ರಾಹ್ಮಣ ಸಮಾಜದವರು ಸಹಕಾರದಿಂದ ವಿಶೇಷ ಪೂಜೆ ನಡೆಯಿತು.
ಭಕ್ತರಿಗೆ ಸ್ಥಳೀಯರು ಪಾನಕ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.