ಹಾಸನ: ದತ್ತಮಾಲೆ ಅಭಿಯಾನ ನಿಮಿತ್ತ ಶ್ರೀರಾಮ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಪ್ರಯಾಣ ಹೊರಟರು.
ನಗರದ ಸಂಗಮೇಶ್ವರ ಬಡಾವಣೆ ಶಿವಪಾರ್ವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕೇಸರಿ ಶಾಲು ಹಾಗೂ ಮಾಲೆ ಧರಿಸಿದ ಕಾರ್ಯಕರ್ತರು ಗುರು ದತ್ತಾತ್ರೇಯ ಹಾಗೂ ಶ್ರೀರಾಮ ಸೇನೆ ಪರವಾಗಿ ಘೋಷಣೆ ಕೂಗಿದರು.
ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಜಾನೆಕರೆ ಹೇಮಂತ್ ಅವರು, ಈ ವರ್ಷವೂ ಸಂಘಟನೆಯ ಕಾರ್ಯಕರ್ತರು ದತ್ತಮಾಲಧಾರಿಗಳಾಗಿ ದತ್ತಪೀಠಕ್ಕೆ ತೆರಳುತ್ತಿದ್ದೇವೆ. ಚಿಕ್ಕಮಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ 20 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ದತ್ತಪೀಠವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು. ಹಿಂದೂ ಅರ್ಚಕರನ್ನು ನೇಮಿಸಿ ಪೂಜೆಗೆ ಅವಕಾಶ ಕಲ್ಪಿಸಬೇಕು. ಅನ್ಯಧರ್ಮೀಯರ ಪೂಜೆ ನಿಷೇಧಿಸಬೇಕು ಎಂಬುವುದು ನಮ್ಮ ಬೇಡಿಕೆ. ಸಾಧು-ಸಂತರೂ ದತ್ತಮಾಲೆ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಶ್ರೀರಾಮ ಸೇನೆ ಉಪಾಧ್ಯಕ್ಷ ಸೌದರಹಳ್ಳಿ ಕುಮಾರ್, ಜಿಲ್ಲಾ ಕಾರ್ಯದರ್ಶಿ ರಘುನಂದನ್, ಸಹ ಕಾರ್ಯದರ್ಶಿಗಳಾದ ರಾಖೇಶ್, ಕಿರಣ್ ಗೌಡ, ಯೋಗೀಶ್, ಚೇತನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.