ADVERTISEMENT

ಸಂಚಾರಿ ನಿಯಮ ಉಲ್ಲಂಘಿಸಬೇಡಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 8:10 IST
Last Updated 9 ಜುಲೈ 2012, 8:10 IST

ಹೊಳೆನರಸೀಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ ದೇಶದಲ್ಲಿಯೇ ಉತ್ತಮ ಸಂಸ್ಥೆ ಎಂದು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸಂಸ್ಥೆ ಇಂತಹ ಮನ್ನಣೆ ಪಡೆದುಕೊಳ್ಳಲು ಸಂಸ್ಥೆಯ ಎಲ್ಲ ಸಿಬ್ಬಂದಿಗಳ ಸೇವೆ ಕಾರಣವಾಗಿದೆ ಎಂದು ಡಿವೈಎಸ್ಪಿ ಪ್ರದೀಪ್‌ಕುಮಾರ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶುಕ್ರವಾರ ಆಯೋಜಿಸಿದ್ದ ಡಿಪೋದ 14 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಚಾಲಕರು ಎಂದೂ ಕೂಡ ಸಂಚಾರಿ ನಿಯಮವನ್ನು ಉಲ್ಲಂಘಿಸಬೇಡಿ. ಅಪಘಾತ ಇಬ್ಬರು ಚಾಲಕರ ಬೇಜವಾ ಬ್ದಾರಿಯಿಂದ ನಡೆಯುತ್ತದೆ. ಆದರೆ ಅದರ ನೋವನ್ನು ಹತ್ತಾರು ಕುಟುಂಬ ಗಳು ಅನುಭವಿಸುತ್ತವೆ. ಆದ್ದರಿಂದ ಚಾಲಕರು ಸದಾ ಜಾಗೃತರಾಗಿರಿ ಎಂದು ಸಲಹೆ ನೀಡಿದರು.

ಉಪನ್ಯಾಸಕ ಕುಮಾರಯ್ಯ ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಚಾಲಕ ನಿರ್ವಾಹಕರಿಗೆ ನೀಡುತ್ತಿರುವ ವೇತನ ಅವರ ಶ್ರಮಕ್ಕೆ ತಕ್ಕಂತಿಲ್ಲ. ವೇತನ ಹೆಚ್ಚಿಸಬೇಕು ಹಾಗೂ ಇಲ್ಲಿ ಚಾಲಕ ನಿರ್ವಾಹಕರಿಗೆ ಕ್ವಾರ್ಟ್ರಸ್ ಕಟ್ಟಿಸಿಕೊಡಬೇಕು ಎಂದು ವಿನಂತಿಸಿದರು.

ಘಟಕ ವ್ಯವಸ್ಥಾಪಕ ಕಮಲ್‌ಕುಮಾರ್ ಮಾತನಾಡಿ, ಸಂಸ್ಥೆಯ ಎಲ್ಲ ಸಿಬ್ಬಂದಿಗಳು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಹಕಾರ ನೀಡಬೇಕು ಎಂದು ವಿನಂತಿಸಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ್‌ಕುಮಾರ್ ಶೆಟ್ಟಿ, ಘಟಕ ವ್ಯವಸ್ಥಾಪಕ ಕಮಲ್‌ಕುಮಾರ್, ಕಾರ್ಮಿಕ ಕಲ್ಯಾಣಾಧಿಕಾರಿ, ಕೆ.ಟಿ. ರವಿ, ಕೃಷ್ಣಮೂರ್ತಿ, ರಾಜಶೇಖರ್, ಇದ್ದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ವಿ. ಸುರೇಶ್‌ಕುಮಾರ್ ಅವರನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.