ಹಳೇಬೀಡು: ನಂಜಾಪುರ ಗ್ರಾಮದಲ್ಲಿ ಬೆಂಕಿ ಆಕಸ್ಮಿಕ ಘಟನೆಯಿಂದ ದಲಿತರ 3 ಗುಡಿಸಲು ಹಾಗೂ 4 ಮನೆ ಸುಟ್ಟು ಭಸ್ಮವಾಗಿರುವುದರಿಂದ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಿಸಿಕೊಂಡುವಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪುರುಷೋತ್ತಮ ಹೇಳಿದರು.
ಬೆಂಕಿ ಆಕಸ್ಮಿಕದಲ್ಲಿ ಸಿಲುಕಿ ಎಲ್ಲವನ್ನು ಕಳೆದುಕೊಂಡ ದಲಿತ ಕುಟುಂಬಗಳಿಗೆ ಬಟ್ಟೆ, ಹಾಸಿಗೆ ಹಾಗೂ ಬೆಡ್ ಶೀಟ್ಗಳನ್ನು ಭಾನುವಾರ ವಿತರಣೆ ಮಾಡಿ ಅವರು ಮಾತನಾಡಿದರು. ಗ್ರಾಮದಲ್ಲಿ ಪರಿಶಿಷ್ಟ ಜನಾಂಗದವರು ಮಾತ್ರ ವಾಸವಾಗಿದ್ದಾರೆ. ಕೂಲಿ ಕಾರ್ಮಿಕರು ಹೆಚ್ಚಾಗಿದ್ದು ಬಡತನ ತಾಂಡವವಾಡುತ್ತಿದೆ. ಸಾಕಷ್ಟು ಮಂದಿ ಗುಡಿಸಲು ವಾಸಿಗಳಾಗಿದ್ದರೆ, ಬಹತೇಕರು ಶಿಥಿಲ ಮನೆಯಲ್ಲಿ ವಾಸವಾಗಿದ್ದಾರೆ. ಗುಡಿಸಲು ಹಾಗೂ ವಾಸಕ್ಕೆ ಯೋಗ್ಯವಾಗಿಲ್ಲದವರ ಮನೆಗಳನ್ನು ಗುರುತಿಸಿ ಪಟ್ಟಿ ಮಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಲಾಗಿದೆ ಎಂದು ಪುರುಷೋತ್ತಮ ತಿಳಿಸಿದರು.
ಮೊದಲು ಬೆಂಕಿ ಆಕಸ್ಮಿಕದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ವ್ಯವಸ್ಥೆ ಮಾಡಲಾಗುವುದು. ಲಾನುಭವಿಗಳೇ ಮನೆ ನಿರ್ಮಿಸಿ, ನಂತರ ಸರ್ಕಾರದಿಂದ ಬಿಲ್ ಪಡೆಯಲು ಶಕ್ತರಾಗಿಲ್ಲದಿರುವುದರಿಂದ ನಿಗಮದಿಂದಲೇ ಮನೆಗಳನ್ನು ನಿರ್ಮಿಸಿಕೊಡುವ ವ್ಯವಸ್ಥೆ ಮಾಡಿಸುವ ಬಗ್ಗೆ ಶೀಘ್ರವೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ನಿರಾಶ್ರಿತರು ಶನಿವಾರ ಸಂಬಂಧಿಕ ಮನೆಯಲ್ಲಿ ರಾತ್ರಿ ಕಳೆದಿದ್ದಾರೆ. ರಾತ್ರಿಯಿಂದಲೇ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಭಾನುವಾರದಿಂದ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮನೆ ವ್ಯವಸ್ಥೆ ಆಗುವವರೆಗೆ ಗಂಜಿ ಕೇಂದ್ರದಲ್ಲಿ ನಿರಾಶ್ರಿತರ ವಾಸಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಪುರುಷೋತ್ತಮ ಹೇಳಿದರು. ಕರ್ನಾಟಕ ಮಾದಿಗ ದಂಡೋರ ಸಮಿತಿ ಪ್ರಧಾನ ಕಾರ್ಯದರ್ಶಿ ನಿಂಗರಾಜು, ಜಿಲ್ಲಾ ಉಪಾಧ್ಯಕ್ಷ ಕುಮಾರಸ್ವಾಮಿ, ತಾಲ್ಲೂಕು ಅಧ್ಯಕ್ಷ ಆನಂದ್, ಮುಖಂಡ ಶಿವಣ್ಣ ಇದ್ದರು.
ಉಪವಿಭಾಗಧಿಕಾರಿ ಭೇಟಿ: ಬೆಂಕಿ ಅನಾಹುತದಿಂದ 7 ಮನೆಗಳು ಸುಟ್ಟು ಹಾನಿಯಾಗಿರುವ ನಂಜಾಪುರ ದಲಿತ ಗ್ರಾಮಕ್ಕೆ ಭಾನುವಾರ ಉಪವಿಭಾಗಾಧಿಕಾರಿ ಶರತ್ ಅವರು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಭೇಟಿ ನೀಡಿ ಸಂತ್ರಸ್ತರಿಂದ ಸಮಸ್ಯೆಗಳನ್ನ ಆಲಿಸಿದರು. ಸಂತ್ರಸ್ತರ ಆರೋಗ್ಯ ಸ್ಥಿತಿಯ ಬಗ್ಗೆ ಪರೀಕ್ಷಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರುವಂತೆ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳಿಗೆ ಗ್ರಾಮದ ಸಮಗ್ರ ಮಾಹಿತಿಯ ವರದಿ ಸಲ್ಲಿಸಲಾಗುವುದು ಎಂದು ಶರತ್ ತಿಳಿಸಿದರು. ಹೆಚ್ಚುವರಿ ಎಸ್ಪಿ ರಶ್ಮಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪುರುಷೋತ್ತಮ, ತಹಶೀಲ್ದಾರ್ ಜಗದೀಶ, ಸಬ್ ಇನ್ಸ್ಪೆಕ್ಟರ್ ಕೆ.ಎಂ. ಮಂಜು, ಉಪತಹಶೀಲ್ದಾರ್ ಶಿವಾನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.