ADVERTISEMENT

ಸಮರ್ಪಕ ನೀರು, ವಿದ್ಯುತ್‌ ನೀಡಲು ರೈತರ ಆಗ್ರಹ

ಅರಸೀಕೆರೆ, ಹಿರೀಸಾವೆ: ಕೇಂದ್ರ ತಂಡದಿಂದ ಬರ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 7:07 IST
Last Updated 24 ಡಿಸೆಂಬರ್ 2013, 7:07 IST

ಅರಸೀಕೆರೆ: ಕೇಂದ್ರದ  ಬರ ಅಧ್ಯಯನ ತಂಡದ ಅಧಿಕಾರಿಗಳು, ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಬರ ಪೀಡಿತ ಅರಸೀಕೆರೆ ತಾಲ್ಲೂಕಿನ ಕೆಲ ಗ್ರಾಮಗಳಿಗೆ ಸೋಮವಾರ ಮಧ್ಯಾಹ್ನ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.

ತಾಲ್ಲೂಕಿನ ಮೈಲನಹಳ್ಳಿ, ಸೂಳೆಕೆರೆ, ಬೆಳಗುಂಬ, ಲಕ್ಷ್ಮೀದೇವರಹಳ್ಳಿ, ಬಂಡೀಹಳ್ಳಿ, ಕೆರಕೋಡಿಹಳ್ಳಿ, ಕಂತೇನಹಳ್ಳಿ ಕೆರೆ, ಗ್ರೀನ್‌ ಲ್ಯಾಂಡ್‌, ಮುದುಡಿ ಹಾಗೂ ಗಂಡಸಿ ಗ್ರಾಮಗಳ ಹೊಲ– ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಜಮಾಯಿಸಿದ ರೈತರು, ‘ಸ್ವಾಮೀ ನಮಗೆ ಸರ್ಕಾರ ನೀಡುವ ಅನ್ನಭಾಗ್ಯ, ಸಾಲ ಮನ್ನಾ ಯೋಜನೆ, ಉಚಿತ ವಿದ್ಯುತ್‌ ಇತರೆ ಯಾವುದೇ ಸೌಲಭ್ಯಗಳು ಬೇಡವೇ ಬೇಡ, ನಮಗೆ ಶಾಶ್ವತವಾದ ಕೆರೆ ಒಡ ಲನ್ನು ತುಂಬಿಸುವ  ನೀರಾವರಿ ಯೋಜನೆ ಮತ್ತು ಸಮರ್ಪಕ ವಿದ್ಯುತ್‌ ನೀಡಿದರೆ ಸಾಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆಯಲ್ಲಿ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ  ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರ ಬದುಕು ಅತಂತ್ರ ಸ್ಥಿತಿಯಾಗಿದೆ.

ಕೆಲಸವಿಲ್ಲದೆ ರೈತ ಸಮುದಾಯ ಹಾಗೂ ಕೂಲಿ ಕಾರ್ಮಿಕರು ಕೆಲಸವಿಲ್ಲದೆ  ನಗರ ಪ್ರದೇಶಗಳತ್ತ ವಲಸೆ ಹೋಗುತ್ತಿದ್ದಾರೆ ಎಂದು ಅವರು ಅಧ್ಯಯನ ತಂಡದ ಅಧಿಕಾರಿಗಳಿಗೆ ರೈತರ ಸ್ಥಿತಿಯನ್ನು ವಿವರಿಸಿದರು 

ಗ್ರೀನ್‌ ಲ್ಯಾಂಡ್‌ನಲ್ಲಿ ಒಣಗಿ ಹೋಗಿರುವ ತೆಂಗಿನ ತೋಟಗಳನ್ನು ಅಧ್ಯಯನ ತಂಡ ವೀಕ್ಷಿಸಿತು. ಕಳೆದ ಬಾರಿಯೂ ಮಾಜಿ ಪ್ರಧಾನಿ ದೇವೇಗೌಡ ಅವರ ಜತೆಯಲ್ಲಿ ಕೇಂದ್ರದ ಅಧ್ಯಯನ ತಂಡ ಹಾಗೂ ಜಿಲ್ಲಾಧಿಕಾರಿಗಳು, ಕೃಷಿ  ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬಂದು ಆನೇಕ ಗ್ರಾಮಗಳ ತೋಟ ಹೊಲ ಕುಡಿಯುವ ನೀರಿನ ಬಗ್ಗೆ ಅಧ್ಯಯನ ನಡೆಸಿ ಹೋಯಿತೇ ವಿನಃ ಇದುವರೆಗೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಹಳಷ್ಟು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಭೇಟಿ ವೇಳೆ ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ದಿ ಅಧಿಕಾರಿ ಸುನೀತಾ ಧವಳೆ, ಹಣಕಾಸು ಇಲಾಖೆಯ ಅಧಿಕಾರಿ ಡಾ.ಚಂದ್ರಶೇಖರ್‌, ಡಾ.ಪಿ.ಜಿ.ಎಸ್‌. ರಾವ್‌ ಜಿಲ್ಲಾಧಿಕಾರಿ ಅನ್ಬುಕುಮಾರ್‌, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವರಾಜ್‌, ತಹಶೀಲ್ದಾರ್‌ ಕೇಶವಮೂರ್ತಿ, ಜಿ.ಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ತಾ.ಪಂ ಅಧ್ಯಕ್ಷ  ಹಾರನಹಳ್ಳಿ ಶಿವಮೂರ್ತಿ, ಪುರಸಭಾ ಅಧ್ಯಕ್ಷ ಮೋಹನ್‌ ಕುಮಾರ್‌, ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಹಿರಿಸಾವೆ ವರದಿ
ಹಿರೀವಾವೆ:
ಕೇಂದ್ರದಿಂದ ಆಗಮಿಸಿರುವ ಮೂರು ಅಧಿಕಾರಿಗಳ ಬರ ಅಧ್ಯಯನ ತಂಡವು ಹೋಬಳಿಯ ಹಲವು ಗ್ರಾಮಗಳಲ್ಲಿ ಸೋಮವಾರ ಪ್ರವಾಸ ಮಾಡಿ ಬರ ಪರಿಸ್ಥಿತಿಯ ಸಮೀಕ್ಷೆ ನಡೆಸಿತು.

ಹೋಬಳಿಯ ಮಾದಲಗೆರೆ, ತೋಟಿ, ಕೊಪ್ಪಲು ಮತ್ತು ಬೆಳಗೀಹಳ್ಳಿ ಗ್ರಾಮಗಳಲ್ಲಿ  ಕೇಂದ್ರದ ಬರ ಅಧ್ಯಯನ ತಂಡದ ಅಧಿಕಾರಿಗಾಳದ ಡಾ.ಎ. ಚಂದ್ರಶೇಖರ್, ಸುನಿತಾ ದಾವಳೆ ಮತ್ತು ಡಾ.ಪಿಜಿಎಸ್‌. ರಾವ್‌ ಅವರು ಜನಪ್ರತಿನಿಧಿಗಳು ಮತ್ತು ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರವಾಸ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಕೃಷ್ಣರವರು ಬೆಳಗೀಹಳ್ಳಿ ಕೆರೆಯ ಬಳಿ ಕೇಂದ್ರ ತಂಡವನ್ನು ಭೇಟಿ ಮಾಡಿ ಮಾಹಿತಿ ನೀಡಿದರು.

ಕಳೆದ ಹತ್ತು ವರ್ಷಗಳಿಂದ ಉತ್ತಮ ಮಳೆಯಾಗದೆ, ಗ್ರಾಮದ ಕೆರೆ ತುಂಬಿಲ್ಲ, ತೆಂಗು ಮತ್ತಿತರ ಬೆಳೆಗಳು ನೀರಿಲ್ಲದೆ ನಾಶವಾಗುತ್ತಿವೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.

ಜಿಲ್ಲಾಧಿಕಾರಿ ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಉಪ ವಿಭಾಗಧಿಕಾರಿ ಶರತ್, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವರಾಜು,  ತಹಶೀಲ್ದಾರ್ ಡಾ.ನಾಗರಾಜು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.