ADVERTISEMENT

ಸೈಬರ್ ಕೆಫೆ ಮಾಲೀಕರಿಗೆ ಪೊಲೀಸ್ ವರಿಷ್ಠಾಧಿಕಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 12:05 IST
Last Updated 13 ಅಕ್ಟೋಬರ್ 2011, 12:05 IST

ಹಾಸನ: `ಸೈಬರ್ ಅಪರಾಧ ಎಸಗುವವರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಸೈಬರ್ ಕೆಫೆ ಮಾಲೀಕರು ಐಡಿಯಾಕ್ಟ್ಸ ಸಂಸ್ಥೆಯವರು ಅಭಿವೃದ್ಧಿಪಡಿಸಿರುವ ತಂತ್ರಾಂಶವನ್ನು ಕಡ್ಡಾಯವಾಗಿ ಅಳವಡಿಸಬೇಕು ಮತ್ತು ಸೈಬರ್ ಕೆಫೆಗಳಿಗಾಗಿಯೇ ರೂಪಿಸಿರುವ ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು~ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಸೂಚನೆ ನೀಡಿದರು.

ಹೊಸ ತಂತ್ರಾಂಶದ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಸೈಬರ್ ಕೆಫೆ ಮಾಲೀಕರು ಹಾಗೂ ವ್ಯವಸ್ಥಾಪಕರಿಗಾಗಿ ಬುಧವಾರ ಹಾಸನದಲ್ಲಿ ಆಯೋಜಿಸಿದ್ದ ತರಬೇತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಭಾರತ ಸರ್ಕಾರ ಸೈಬರ್ ಕೆಫೆ ಮಾಲೀಕರಿಗೆ ಮಾರ್ಗದರ್ಶಿ ಬಿಡುಗಡೆ ಮಾಡಿದೆ. ಅದರಂತೆ ಮಾಲೀಕರು ಅಂಗಡಿಗೆ ಬರುವ ಗ್ರಾಹಕರ ಭಾವಚಿತ್ರ ಹಾಗೂ ವಿವರಗಳನ್ನು ಸಂಗ್ರಹಿಸಿ ಇಡಬೇಕಾಗುತ್ತದೆ.

ಒಂದು ವರ್ಷದ ಅವಧಿಗೆ ಅದನ್ನು ಸಂಗ್ರಹಿಸಿ ಇಡಬೇಕು ಮತ್ತು ಪ್ರತಿ ತಿಂಗಳ ಐದನೇ ತಾರೀಕಿನೊಳಗೆ ಅಂಗಡಿಗೆ ಬಂದಿರುವ ಗ್ರಾಹಕರ ಬಗ್ಗೆ ವಿವರಗಳನ್ನು ನಿಗದಿತ ಪೊಲೀಸ್ ಠಾಣೆಗೆ ನೀಡಬೇಕು. ಇಂಥ ಹಲವು ನಿಯಮಗಳನ್ನು ಮಾಡಲಾಗಿದ್ದು ಕಡ್ಡಾಯವಾಗಿ ಇದನ್ನು ಪಾಲಿಸಬೇಕು ಎಂದರು.

`ಗ್ರಾಹಕರ ಮಾಹಿತಿಯನ್ನು ನೀಡುವ ಸಲುವಾಗಿ ಐಡಿಯಾಕ್ಟ್ಸ್ ಸಂಸ್ಥೆಯವರು `ಕ್ಲಿಂಕ್~ ಎಂಬ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಎಲ್ಲ ಮಾಲೀಕರೂ ಇದನ್ನು ಅಳವಡಿಸಿಕೊಳ್ಳಬೇಕು. ಸಂಸ್ಥೆಯವರೇ ಉಚಿತವಾಗಿ ಈ ಸಾಫ್ಟ್‌ವೇರ್ ಕೊಟ್ಟು ಕೆಲವು ದಿನಗಳ ಕಾಲ ತರಬೇತಿ ನೀಡಿ ಹೋಗುತ್ತಾರೆ~ ಎಂದರು.

ಕಾರ್ಯಕ್ರಮದ ಬಳಿಕ ಪತ್ರಕರ್ತರೊಡನೆ ಮಾತನಾಡಿದ ಅಮಿತ್ ಸಿಂಗ್, `ಜಿಲ್ಲೆಯಲ್ಲಿ ಒಟ್ಟಾರೆ 64 ಸೈಬರ್ ಕೆಫೆಗಳಿವೆ. ಇವರಲ್ಲಿ ನಾಲ್ಕೈದು ಮಂದಿ ಈಗಾಗಲೇ ಈ ತಂತ್ರಾಂಶವನ್ನು ಅಳವಡಿಸಿದ್ದಾರೆ. ಉಳಿದವರಿಗೂ ಅದನ್ನು ಕಡ್ಡಾಯಗೊಳಿಸಲಾಗುವುದು.

ಅಂಗಡಿಗೆ ಬರುವ ಗ್ರಾಹಕರ ಭಾವಚಿತ್ರ ಸಹಿತ ಮಾಹಿತಿಯನ್ನು ಒಮ್ಮೆ ದಾಖಲಿಸಿಕೊಂಡರೆ ಆ ವ್ಯಕ್ತಿ ದೇಶದ ಯಾವ ಮೂಲೆಯಲ್ಲಿ ಕುಳಿತು ಇಂಟರ್‌ನೆಟ್ ಸಂಪರ್ಕ ಮಾಡಿದರೂ ಕ್ಷಣಾರ್ಧದಲ್ಲಿ ಅವನ ವಿವರಗಳನ್ನು ಪಡೆಯಬಹುದು. ಸೈಬರ್ ಅಪರಾಧಿಗಳನ್ನು ಪತ್ತೆಮಾಡಲು ಈ ವ್ಯವಸ್ಥೆ ಸಹಕಾರಿಯಾಗುತ್ತದೆ~ ಎಂದರು.

ಹೊಸ ತಂತ್ರಜ್ಞಾನದ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ಮತೀನುಲ್ಲಾ ಖಾನ್ ವಿವರಗಳನ್ನು ನೀಡಿ, ಸೈಬರ್  ಕೆಫೆ ಮಾಲೀಕರು ಹಾಗೂ ವ್ಯವಸ್ಥಾಪಕರ ಸಂದೇಹಗಳಿಗೆ ಉತ್ತರ ನೀಡಿದರು.ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಪ್ರತಿನಿಧಿಗಳು ಹಾಗೂ ವಿವಿಧ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.