ADVERTISEMENT

ಹೈಕಮಾಂಡ್ ಮಾತಿಗೆ ಗೌರವ ನೀಡಿದ್ದೇನೆ

ನಾಮಪತ್ರ ಹಿಂಪಡೆದ ಮಹಮ್ಮದ್ ಸನಾವುಲ್ಲಾ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 13:23 IST
Last Updated 28 ಏಪ್ರಿಲ್ 2018, 13:23 IST

ಭದ್ರಾವತಿ: ‘ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಮಾತಿನ ಭರವಸೆಗೆ ಬದ್ಧನಾಗಿ ನಾಮಪತ್ರ ಹಿಂದಕ್ಕೆ ಪಡೆದಿದ್ದೇನೆ’ ಎಂದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಹಮ್ಮದ್ ಸನಾವುಲ್ಲಾ ಹೇಳಿದರು.

ಶುಕ್ರವಾರ ನಾಮಪತ್ರ ವಾಪಸ್‌ ಪಡೆದ ನಂತರ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು ‘ಗುರುವಾರ ಮುರುಡೇಶ್ವರ ಅತಿಥಿಗೃಹದಲ್ಲಿ ಎಐಸಿಸಿ ಅಧ್ಯಕ್ಷರನ್ನು ಹಾಗೂ ರಾಜ್ಯದ ಮುಖಂಡರನ್ನು ಭೇಟಿ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಮಾಹಿತಿ ನೀಡಿದರು.

‘ನಾಲ್ಕು ದಶಕಗಳಲ್ಲಿ ಏಳು ಬಾರಿ ಪಕ್ಷದ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದೇನೆ. ಎಸ್. ಬಂಗಾರಪ್ಪ ಮುಖಮಂತ್ರಿ ಇದ್ದಾಗ ನಾನು ಶಿವಮೊಗ್ಗ–ಭದ್ರಾವತಿ ಮಹಾನಗರಪಾಲಿಕೆ ಉಪ ಮೇಯರ್ ಆಗಿದ್ದೆ ಎಂಬ ಸಂಗತಿಗಳನ್ನು ಅವರ ಗಮನಕ್ಕೆ ತಂದು ಪಕ್ಷಕ್ಕೆ ಮಾಡಿರುವ ಸೇವೆಯನ್ನು ತಿಳಿಸಿದೆ’ ಎಂದು ಅವರು ಹೇಳಿದರು.

ADVERTISEMENT

ಇದಕ್ಕೆ ಸ್ಪಂದಿಸಿದ ರಾಹುಲ್ ಗಾಂಧಿ ‘ನೀವು ಪಕ್ಷದಲ್ಲಿ ಹಿರಿಯರಿದ್ದೀರಿ, ನಿಮ್ಮನ್ನು ನಾವು ಕೈಬಿಡುವುದಿಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲಿಸಿ ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಭರವಸೆಯ ಮಾತುಗಳನ್ನು ಹೇಳಿದರು’ ಎಂದು ತಿಳಿಸಿದರು.

ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ‘ಟಿಕೆಟ್ ಹಂಚಿಕೆ ವೇಳೆ ಹಲವು ಮಾನದಂಡ ಪರಿಗಣನೆ ಮಾಡಲಾಗಿದೆ. ಇದಕ್ಕೆ ಚಿಂತೆ ಮಾಡುವ ಅಗತ್ಯವಿಲ್. ಬಂಡಾಯದಿಂದ ಹೊರಬನ್ನಿ ಪಕ್ಷ ನಿಮ್ಮನ್ನು ಗೌರವಿಸುತ್ತದೆ’ ಎಂದು ಭರವಸೆ ನೀಡಿದ್ದಾರೆ ಎಂದರು.

‘ಎಲ್ಲಾ ನಾಯಕರ ಮನವೊಲಿಕೆ ಹಾಗೂ ಬೆಂಬಲದ ಮಾತಿಗೆ ಗೌರವ ನೀಡಿ ನಾನು ಶುಕ್ರವಾರ ಮಧ್ಯಾಹ್ನ ನಾಮಪತ್ರ ಹಿಂದಕ್ಕೆ ಪಡೆದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.