ADVERTISEMENT

‘ಶ್ರವಣಬೆಳಗೊಳ ಅಭಿವೃದ್ಧಿಗೆ ₹10 ಕೋಟಿ ಬಿಡುಗಡೆ’

ಜೈನ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಯೋಜನೆ: ಜಿಲ್ಲಾಧಿಕಾರಿ ಆರ್‌.ಗಿರೀಶ್

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 15:22 IST
Last Updated 25 ಮಾರ್ಚ್ 2022, 15:22 IST
ದೀಕ್ಷಾಕಲ್ಯಾಣ ನಿಮಿತ್ತ ಶಾಂತರತ್ನ ಬಿ. ಜಟ್ಟಪ್ಪ ಅವರು ಪಿಂಚಿ ಸರ್ಮಪಿಸಿದರು.
ದೀಕ್ಷಾಕಲ್ಯಾಣ ನಿಮಿತ್ತ ಶಾಂತರತ್ನ ಬಿ. ಜಟ್ಟಪ್ಪ ಅವರು ಪಿಂಚಿ ಸರ್ಮಪಿಸಿದರು.   

ಹಾಸನ: ‘ಜೈನಕಾಶಿ ಶ್ರವಣಬೆಳಗೊಳ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ₹20 ಕೋಟಿ ಪೈಕಿ ₹10 ಕೋಟಿ ಅನುದಾನವನ್ನುಈಗಾಗಲೇ ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ತಿಳಿಸಿದರು.

ಪಾರ್ಶ್ವನಾಥ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವದಅಂಗವಾಗಿ ನಗರದ ಎಂ.ಜಿ.ರಸ್ತೆಯಲ್ಲಿ ನಿರ್ಮಿಸಿರುವ ಸಿಂಹಾಸನಪುರಿವೇದಿಕೆಯಲ್ಲಿ ಶುಕ್ರವಾರ ನಡೆದ ದೀಕ್ಷಾ ಕಲ್ಯಾಣ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶ್ರವಣಬೆಳಗೊಳದಲ್ಲಿವಿಶಾಲವಾದ ಸಭಾಭವನ, ಭೋಜನಾ ಶಾಲೆ ನಿರ್ಮಾಣ ಕಾರ್ಯಪ್ರಗತಿಯಲ್ಲಿದೆ. ಪ್ರಾಕೃತ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣ ಕಾರ್ಯಪೂರ್ಣಗೊಂಡಿದ್ದು, ಮಾರ್ಚ್‌ 26ರಂದು ಲೋಕೋಪಯೋಗಿ ಇಲಾಖೆಯಿಂದ ಜೈನ ಮಠಕ್ಕೆ ಹಸ್ತಾಂತರಿಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘800 ವರ್ಷಗಳ ಹಳೆಯ ಜೈನ ಬಸದಿಯನ್ನು ಜೀರ್ಣೋದ್ಧಾರ ಮಾಡಿರುವುದು ಒಳ್ಳೆಯ ಕಾರ್ಯ. ಬೇಲೂರು, ಹಳೇಬೀಡಿನಲ್ಲಿ ಆಳ್ವಿಕೆ ಮಾಡಿದ್ದ ಮಹಾರಾಜರು ಜೈನ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದರು. 1,900 ವರ್ಷಗಳ ಹಿಂದೆ ಮೌರ್ಯ ಸಾಮ್ರಾಜ್ಯ ಸಂಸ್ಥಾಪಕ ಚಂದ್ರಗುಪ್ತ ಮೌರ್ಯ ತನ್ನಕೊನೆಯ ದಿನಗಳನ್ನು ಶ್ರವಣಬೆಳಗೊಳದಲ್ಲಿ ಕಳೆದಿದ್ದರು’ ಎಂದು ಹೇಳಿದರು.

‘ಸಮಾಜದಲ್ಲಿ ಸೌಹಾರ್ದತೆ ಮತ್ತು ಮೌಲ್ಯಗಳು ಕಾಣೆಯಾಗುತ್ತಿವೆ. ಇಂತಹಸಂದರ್ಭದಲ್ಲಿ ಜೈನ ಧರ್ಮದ ತತ್ವಗಳು ಅತ್ಯಂತ ಪ್ರಮುಖವಾದವು. ಅಹಿಂಸಾ ತತ್ವ ಇಂದಿಗೂ ಪ್ರಚಲಿತವಾಗಿದ್ದು, ಸದೃಢ ಮತ್ತು ಸೌಹಾರ್ದ ಸಮಾಜ ನಿರ್ಮಾಣಕ್ಕೆ ಜೈನ ಧರ್ಮ ಸಹಕಾರಿ’ ಎಂದರು.

‘ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಬೇಲೂರು ಹಾಗೂ ಹಳೇಬೀಡು ದೇವಸ್ಥಾನವನ್ನು ಸೇರಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಅದರ ಜೊತೆಗೆ ಜೈನ ಸ್ಮಾರಕಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು’ ಎಂದು ತಿಳಿಸಿದರು.

ಮಾಜಿ ಶಾಸಕ ಸಂಜಯ್ ಪಾಟೀಲ ಮಾತನಾಡಿ, ‘ಮಕ್ಕಳಿಗೆ ಶಿಕ್ಷಣದ ಜೊತೆಗೆಸಂಸ್ಕಾರ ಕಲಿಸುವುದರಿಂದತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುವುದನ್ನುತಡೆಯಬಹುದು. ಅದಕ್ಕಾಗಿ ಮಕ್ಕಳಿಗೆ ಮನೆಯಲ್ಲಿ ಜೈನ ಧರ್ಮದ ತತ್ವಗಳನ್ನು ತಿಳಿಸಿ, ಮುನಿಗಳಸಂದೇಶ ಕೇಳಿಸಬೇಕು.ಜೈನ ಧರ್ಮದ ಜನಸಂಖ್ಯೆ ಕಡಿಮೆ ಇದ್ದರೂ ಧರ್ಮದ ಕಾರ್ಯಕ್ರಮಗಳಲ್ಲಿ ಶಕ್ತಿತೋರಿಸುವ ಕೆಲಸ ಆಗುತ್ತಿದೆ’ ಎಂದು ನುಡಿದರು.

ಪುಣ್ಯಸಾಗರ ಮಹಾರಾಜರು ಹಾಗೂ ಶ್ರೀಕ್ಷೇತ್ರ ಸ್ವಾದಿ (ಸೋಂದ) ಮಠದಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಆರ್‌. ಮೋಹನ್‌, ಪೌರಾಯುಕ್ತ ಪಿ.ಆರ್‌.ಪರಮೇಶ್ವರಪ್ಪ, ಮಹಾವೀರ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್‌ಅಧ್ಯಕ್ಷ ಎಂ. ಧನಪಾಲ್‌, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಜಿತೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.