ADVERTISEMENT

ಹಾಸನದ ಶಾಂತಿಗ್ರಾಮದ ಬಳಿ ಹೊತ್ತಿ ಉರಿದ ಬಸ್‌: 30 ಪ್ರಯಾಣಿಕರು ಪಾರು

ತಾಂತ್ರಿಕ ತೊಂದರೆ: ಹೊತ್ತಿ ಉರಿದ ಬಸ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 13:03 IST
Last Updated 29 ಸೆಪ್ಟೆಂಬರ್ 2019, 13:03 IST
ಹಾಸನ ತಾಲ್ಲೂಕಿನ ಶಾಂತಿಗ್ರಾಮ ಬಳಿ ಬೆಂಕಿ ತಗುಲಿ ಹೊತ್ತಿ ಉರಿದ ಖಾಸಗಿ ಬಸ್‌.
ಹಾಸನ ತಾಲ್ಲೂಕಿನ ಶಾಂತಿಗ್ರಾಮ ಬಳಿ ಬೆಂಕಿ ತಗುಲಿ ಹೊತ್ತಿ ಉರಿದ ಖಾಸಗಿ ಬಸ್‌.   

ಹಾಸನ: ತಾಲ್ಲೂಕಿನ ಶಾಂತಿಗ್ರಾಮದ ಬಳಿ ಭಾನುವಾರ ಬೆಳಗಿನ ಜಾವ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ವೇಳೆ ಬಸ್‌ನಲ್ಲಿದ್ದ 30 ಪ್ರಯಾಣಿಕರು ಮತ್ತು ಸಿಬ್ಬಂದಿ ವಾಹನದಿಂದ ಕೂಡಲೇ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.‌

ಬೆಂಗಳೂರಿನಿಂದ ಬೈಂದೂರುಗೆ ಹೋಗುತ್ತಿದ್ದ ಭಾರತಿ ಟ್ರಾವೆಲ್ಸ್‌ ಗೆ ಸೇರಿದ ಸ್ಲೀಪರ್‌ ಬಸ್‌ ಬೆಳಗಿನ ಜಾವ 3 ರ ಸುಮಾರಿಗೆ ಶಾಂತಿಗ್ರಾಮ ಬಳಿ ಬರುತ್ತಿದ್ದಂತೆ ವಾಹನದ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿದೆ.

ಇದನ್ನು ಗಮನಿಸಿದ ಚಾಲಕ ತಕ್ಷಣ ಬಸ್‌ ಅನ್ನು ರಸ್ತೆ ಬದಿ ನಿಲ್ಲಿಸಿ, ನಿದ್ದೆಯಲ್ಲಿದ್ದ ಪ್ರಯಾಣಿಕರನ್ನು ಎಬ್ಬಿಸಿ ಕೆಳಗೆ ಇಳಿಸಿದ್ದಾರೆ. ಹಾಗಾಗಿ ಹೆಚ್ಚಿನ ಅನಾಹುತ ತಪ್ಪಿದೆ. ನೋಡು ನೋಡುತ್ತಿದ್ದಂತಯೇ ಬೆಂಕಿಯ ಪ್ರಮಾಣ ಹೆಚ್ಚಿ, ವಾಹನ ಸುಟ್ಟು ಕರಕಲಾಯಿತು. ಪ್ರಯಾಣಿಕರ ಬಟ್ಟೆ ಮತ್ತಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ADVERTISEMENT

ವಿಷಯ ತಿಳಿದು ವಾಹನದಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆ ವೇಳೆಗಾಗಲೇ ಬಸ್‌ ಮತ್ತು ಪ್ರಯಾಣಿಕರ ವಸ್ತಗಳು ಸುಟ್ಟು ಹೋಗಿದ್ದವು.

ಶಾಂತಿ ಗ್ರಾಮ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಯಾಣಿಕರನ್ನು ಮತ್ತೊಂದು ಬಸ್‌ ನಲ್ಲಿ ಕಳುಹಿಸಲಾಯಿತು.

ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ತಾಸಿಗೂ ಅಧಿಕ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲವರು ಘಟನೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.