ಹಾಸನ: ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ಡಿವೈಎಫ್ಐ ಹಾಗೂ ಎಸ್ಎಫ್ಐ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 30 ಯುನಿಟ್ ರಕ್ತ ಸಂಗ್ರಹವಾಯಿತು.
ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿ ಸಾವು-ನೋವುಗಳು ಸಂಭವಿಸುತ್ತಿವೆ. ಸರ್ಕಾರದ ಲಾಕ್ ಡೌನ್ ಕಾರಣದಿಂದಾಗಿ ಬಡವರು ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವಾರು ಕಾಯಿಲೆಗಳು, ಅಪಘಾತಕ್ಕೆ ತುತ್ತಾದವರು ಹಾಗೂ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಜೀವ ಉಳಿಸಿಕೊಳ್ಳಲು ಜೀವ ರಕ್ಷಕ ರಕ್ತಕ್ಕಾಗಿ ಪರದಾಡುವ ಸ್ಥಿತಿಯುಂಟಾಗಿದೆ.
ಈ ಹಿನ್ನೆಲೆಯಲ್ಲಿ 'ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ)’ ಸಂಘಟನೆಗಳ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಹಲವಾರು ಯುವಕರು ಹಾಗೂ ಯುವತಿಯರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಇತರರಿಗೆ ಸ್ಪೂರ್ತಿಯಾದರು.
ಹಿಮ್ಸ್ ರಕ್ತ ನಿಧಿ ವೈದ್ಯಾಧಿಕಾರಿ ಡಾ.ನಾಗಲಕ್ಷ್ಮಿ ಮಾತನಾಡಿ, ಡಿವೈಎಫ್ಐ ಮತ್ತು ಎಸ್ಎಫ್ಐಸಂಘಟನೆಗಳು ಕೋವಿಡ್ ಕಾಲದ ಸಂಕಷ್ಟದಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಸಮಾಜಕ್ಕೆಮಾದರಿಯಾಗಿವೆ. ಯುವಜನರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲುಮುಂದಾಗಬೇಕು. ಇದರಿಂದಾಗಿ ಹಲವಾರು ಜೀವಗಳನ್ನು ಉಳಿಸಬಹುದಾಗಿದೆ ಎಂದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರಮೇಶ್, ಮುಖಂಡ ರಕ್ಷಿತಾ ಶಿಬಿರದ ನೇತೃತ್ವ ವಹಿಸಿದ್ದರು.
ರೈತ ಮುಖಂಡರಾದ ನವೀನ್ ಕುಮಾರ್ ಮತ್ತು ವಸಂತ್ ಕುಮಾರ್ ಭಾಗಿಯಾಗಿ ರಕ್ತದಾನ ಮಾಡಿದರು. ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ ಘಟಕದ ಸಿಬ್ಬಂದಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.