ಶ್ರವಣಬೆಳಗೊಳ: ಹೇಮಾವತಿ ನಾಲಾ ವಿಭಾಗದ ಮೂಲಕ ಅಂದಾಜು ₹ 3.5 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಬುಧವಾರ ಹೇಳಿದರು.
ಹೋಬಳಿಯ ಡಿ.ಹೊನ್ನೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಭಾಗದ ರಸ್ತೆ ಅಭಿವೃದ್ಧಿ, ಸೇತುವೆಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಮೂರು ಸೋಪಾನ ಕಟ್ಟೆಗಳ ನಿರ್ಮಾಣ, ಇತರೆ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಗುರಿಗಾರನಹಳ್ಳಿ, ಕಾಂತರಾಜಪುರ, ಕಬ್ಬಾಳು, ಸಾಬರ ಕೊಪ್ಪಲು, ಡಿಂಕದಕೊಪ್ಪಲು, ಸುಣ್ಣದಕೊಪ್ಪಲು ಡಿ.ಹೊನ್ನೇಹಳ್ಳಿ, ಆಲದಹಳ್ಳಿ, ದಮ್ಮನಿಂಗಲ, ಕೊತ್ತನಘಟ್ಟದಿಂದ ಶ್ರವಣಬೆಳಗೊಳ ಮಾರ್ಗದ ರಸ್ತೆಗಳು ಇದರಲ್ಲಿ ಸೇರಿವೆ ಎಂದರು.
ಅಂದಾಜು ₹ 7.5 ಲಕ್ಷ ವೆಚ್ಚದ ಈ ನೂತನ ಡೇರಿ ಕಟ್ಟಡವನ್ನು ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಸಂಘದಿಂದ ₹ 3 ಲಕ್ಷ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹ 47 ಸಾವಿರ, ₹ 4 ಲಕ್ಷ ಗಳನ್ನು ಡೇರಿ ಆದಾಯದಿಂದ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಜಿ.ಆನಂದ ಕುಮಾರ್, ನಿರ್ದೇಶಕರಾದ ಮಧುಕುಮಾರ್, ಎಚ್.ಎನ್. ಸತೀಶ್, ಗಣೇಶ್, ಕೃಷ್ಣೇಗೌಡ, ದೇವರಾಜು, ಎಚ್.ಎಸ್.ತಾಯಮ್ಮ ಶಿವನಂಜೇಗೌಡ, ಕಾರ್ಯದರ್ಶಿ ಎಚ್.ಕೆ. ಪರಮೇಶ್, ಹೇಮಾವತಿ ನಾಲಾ ವಿಭಾಗದ ಎಂಜಿನಿಯರ್ಗಳಾದ ನಾಗೇಂದ್ರ, ಅಮೃತ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ರಮೇಶ್, ಮುಖಂಡರಾದ ಎ.ಆರ್.ಶಿವರಾಜ್, ಪರಮ ಕೃಷ್ಣೇಗೌಡ, ದೇವರಾಜೇಗೌಡ, ವಿ.ಎನ್.ರಾಜಣ್ಣ, ಜಯರಾಂ, ದಮ್ಮನಿಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷೆ ಸುಮಾ ದಿನೇಶ್, ಡೇರಿ ವಿಸ್ತರಣಾಧಿಕಾರಿಗಳಾದ ಎಂ. ದಯಾನಂದ್, ಕೃಷ್ಣಮೂರ್ತಿ, ರಾಜೇಶ್, ಪ್ರಶಾಂತ್ ಹಾಗೂ ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.