ಹಾಸನ: ಸುತ್ತಲೂ ಅವರೆ ಬೆಳೆದ ಹೊಲ. ಕೋಸು ಮತ್ತು ಹಿಂಗಾರು ಆಲೂಗೆಡ್ಡೆ ಬಿತ್ತನೆಯಾಗುತ್ತಿದ್ದ ಗದ್ದೆ. ನಡುವೆ ರಾಗಿಹುಲ್ಲಿನ ಎರಡು ಮೆದೆಗಳಿಂದ ಕೂಡಿದ್ದ, ರಂಗೋಲಿ ಚಿತ್ತಾರದ ಸ್ವಚ್ಛ ಕಣ, ಅದರಲ್ಲಿ ನಗರದ ಮಕ್ಕಳ ಕಲರವ.
ನಗರದ ವಾಸವಿ ಆಂಗ್ಲ ಮಾಧ್ಯಮ ಶಾಲೆ ಮಕ್ಕಳಿಗೆ ಒಕ್ಕಲುತನದ ವಿವಿಧ ಮಜಲುಗಳನ್ನು ಪ್ರತ್ಯಕ್ಷ ಪರಿಚಯಿಸುವ ಉದ್ದೇಶದಿಂದ ಬಾಗೇಶಪುರದ ಹೊಲದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.
ಜಾನಪದ ಸೊಗಡು ಪರಿಚಯಿಸುವ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಬರಹಗಳ ‘ಲೋಕ್ ಪ್ರಥಾ’ ಸಂಚಿಕೆ ಲೋಕಾರ್ಪಣೆ ಮಾಡಿ ವಾರ್ತಾ ಪ್ರಸಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ಚಂದ್ರ ಮಾತನಾಡಿದರು.
‘ಶ್ರಮದಲ್ಲಿ ದೇವರನ್ನು ಕಾಣುವ ಗ್ರಾಮೀಣರು ಅಭಿವೃದ್ಧಿಯ ಪಥದಲ್ಲಿ ಸಾಗುವಾಗ ಹಿಂದಿನದನ್ನು ಮರೆಯದೆ ಸಂಸ್ಕೃತಿಯ ಬೇರನ್ನು ಗಟ್ಟಿಯಾಗಿಸಿ ಉಳಿಸಿಕೊಟ್ಟಿದ್ದಾರೆ. ಅದು ಆಹಾರ ಸೇವನೆ, ಪರಸ್ಪರ ಸಹಬಾಳ್ವೆ, ಇತರರ ಹಿತಚಿಂತನೆ ಎಲ್ಲಕ್ಕೂ ಮುನ್ನುಡಿ ಬರೆದಂತಿದೆ. ಜಾನಪದ ಎಲ್ಲ ವಿಕಸನಕ್ಕೂ ತಾಯಿಬೇರು’ ಎಂದು ನುಡಿದರು.
160 ಪುಟಗಳ ಕನ್ನಡ ಜಾನಪದ ಲೋಕವನ್ನು ಚಿತ್ರಿಸುವ ‘ಬೇರು’ ಸಂಚಿಕೆಯನ್ನು ಹಿರಿಯ ಪತ್ರಕರ್ತೆ ಲೀಲಾವತಿ ಲೋಕಾರ್ಪಣೆ ಮಾಡಿದರು.
ಶಾಲೆಯ ಮಕ್ಕಳು ಕೋಲಾಟ ಮತ್ತು ನೃತ್ಯ ಪ್ರಸ್ತುತಪಡಿಸಿದರು. ಸ್ಥಳೀಯ ಕಲಾವಿದರಾದ ತಿಮ್ಮಮ್ಮ, ನಿಂಗಮ್ಮ, ನಂಜಮ್ಮ, ನಂಜುಂಡಮ್ಮ ತಂಡದವರು ಸೋಬಾನೆ ಗೀತೆಗಳನ್ನು ಹಾಡಿದರು.
ಮುಖ್ಯಶಿಕ್ಷಕಿ ಶೀಲಾ ಸ್ವಾಗತಿಸಿ, ವಂದಿಸಿದರು. ಅರ್ಚನಾಭಟ್, ಕಲ್ಪನಾ ಅಲೋನಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕವಿತಾ, ಚಿತ್ರಕಲಾ ಶಿಕ್ಷಕ ವಿರೂಪಾಕ್ಷ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.