ಹಾಸನ: ಗ್ರಾಹಕರು ನೀಡಿದ ದೂರು ಆಧರಿಸಿ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.
ನಗರ ಹೊರವಲಯದ ಬಿ. ಕಾಟಿಹಳ್ಳಿಯಲ್ಲಿರುವ ಕಚೇರಿ ಮೇಲೆ ಡಿವೈಎಸ್ಪಿ ಕೃಷ್ಣಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ,ಕಚೇರಿಯ ಗೇಟ್ ಹಾಗೂ ಬಾಗಿಲಿಗೆ ಬೀಗ ಹಾಕಿಸತತ ಮೂರು ತಾಸು ದಾಖಲೆಗಳ ಪರಿಶೀಲನೆ ನಡೆಸಿತು. ಬಳಿಕ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿತು.
ದಿಢೀರ್ ದಾಳಿಯಿಂದ ಆರ್.ಟಿ.ಒ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ಮಧ್ಯವರ್ತಿಗಳು ಬೆಚ್ಚಿ ಬಿದ್ದರು. ಕಚೇರಿ ಮಾತ್ರವಲ್ಲದೆ ಮುಂಭಾಗದ ಹಲವು ಅಂಗಡಿಗಳ ಮೇಲೂ ದಾಳಿ ನಡೆಯಿತು.
ಅಂಗಡಿಗಳಲ್ಲಿದ್ದ ಹಣ, ಚಾಲನಾ ಪರವಾನಗಿ, ಆರ್.ಸಿ ಬುಕ್ಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಸಂಜೆವರೆಗೂ ಸಿಬ್ಬಂದಿ ವಿಚಾರಣೆ ನಡೆಯಿತು. ದಾಳಿ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಇರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.