ಹೊಳೆನರಸೀಪುರ (ಹಾಸನ ಜಿಲ್ಲೆ): ತಾಲ್ಲೂಕಿನ ಉದ್ದೂರು ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಶನಿವಾರ ಬೆಳಿಗ್ಗೆ ಎತ್ತಿನಗಾಡಿ ಮುಳುಗಿ, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಗ್ರಾಮದ ರೈತ ರಾಜೇಗೌಡ (65), ಅವರ ಪತ್ನಿ ಶಾರದಮ್ಮ (55), ರುಚಿತಾ (7) ಹಾಗೂ ದ್ವಿತಿತಾ (4)ಮೃತಪಟ್ಟವರು.
ಮಕ್ಕಳಿಬ್ಬರೂ ರಾಜೇಗೌಡರ ಅಣ್ಣನ ಮೊಮ್ಮಕ್ಕಳಾಗಿದ್ದು, ಬೇಸಿಗೆ ರಜೆ ಕಳೆಯಲೆಂದು ಮೈಸೂರಿನಿಂದ ಬಂದಿದ್ದರು.
ಘಟನೆ ವಿವರ: ರಾಜೇಗೌಡ ಹಾಗೂ ಅವರ ಪತ್ನಿ, ಜೋಳ ಬಿತ್ತನೆಗಾಗಿ ಎತ್ತಿನಗಾಡಿ ಕಟ್ಟಿಕೊಂಡು ಹೊಲಕ್ಕೆ ಹೊರಡಲು ಬೆಳಿಗ್ಗೆ ಸಿದ್ಧರಾಗಿದ್ದರು. ತಮ್ಮೊಂದಿಗೆ ಬರಲು ಇಚ್ಛಿಸಿದ ಈ ಮಕ್ಕಳನ್ನೂ ಕರೆದುಕೊಂಡು ಹೊರಟಿದ್ದರು. ಹೊಲಕ್ಕೆ ಹೋಗಲು ಕೆರೆಯ ಏರಿಯ ಮೇಲೆ ಜಾಗ ಇದ್ದರೂ, ದಾರಿ ಸಮೀಪವಾಗುತ್ತದೆ ಎಂದು ಎಂದಿನಂತೆ ಕೆರೆಯ ಬಯಲಿನಲ್ಲಿ ಗಾಡಿ ಹೊಡೆದುಕೊಂಡು ಹೋಗಿದ್ದಾರೆ. ಈಚೆಗೆ ಬಿದ್ದ ಮಳೆಯಿಂದಾಗಿ, ಹೂಳೆತ್ತಿದ ಗುಂಡಿಗಳು ಕಂಡಿಲ್ಲ. ಗುಂಡಿಯೊಂದರಲ್ಲಿ ಎತ್ತಿನ ಗಾಡಿ ಮಗುಚಿ, ಎಲ್ಲರೂ ಕೆಸರು ನೀರಿನಲ್ಲಿ ಮುಳುಗಿದ್ದಾರೆ. ಎತ್ತುಗಳು ದಡ ಸೇರಿವೆ.
ಗ್ರಾಮಸ್ಥರ ಸಹಾಯದಿಂದ, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.