ADVERTISEMENT

ಹಾಸನ | ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮ: ಬೀದಿಗೆ ಬಿದ್ದ ಕುಟುಂಬ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 7:49 IST
Last Updated 1 ಜನವರಿ 2022, 7:49 IST
ಅರಕಲಗೂಡು ತಾಲ್ಲೂಕು ಅತ್ನಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮವಾದ ಸಂತ್ರಸ್ತ ಕುಟುಂಬಕ್ಕೆ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಹರೀಶ್ ಪರಿಹಾರ ಧನದ ಚೆಕ್ ವಿತರಿಸಿದರು. ಬಿಎಸ್‌ಪಿ ಅಧ್ಯಕ್ಷ ಅತ್ನಿ ಹರೀಶ್, ಪಿಡಿಒ ನಾಗರಾಜ್ ಇದ್ದರು
ಅರಕಲಗೂಡು ತಾಲ್ಲೂಕು ಅತ್ನಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮವಾದ ಸಂತ್ರಸ್ತ ಕುಟುಂಬಕ್ಕೆ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಹರೀಶ್ ಪರಿಹಾರ ಧನದ ಚೆಕ್ ವಿತರಿಸಿದರು. ಬಿಎಸ್‌ಪಿ ಅಧ್ಯಕ್ಷ ಅತ್ನಿ ಹರೀಶ್, ಪಿಡಿಒ ನಾಗರಾಜ್ ಇದ್ದರು   

ಅರಕಲಗೂಡು: ತಾಲ್ಲೂಕಿನ ಅತ್ನಿ ಗ್ರಾಮದಲ್ಲಿ ಗುಡಿಸಿಲಿಗೆ ಆಕಸ್ಮಿಕ ಬೆಂಕಿ ಬಿದ್ದು ಒಳಗೆ ಮಲಗಿ ನಿದ್ರಿಸುತ್ತಿದ್ದ ಕುಟುಂಬದ ಸದಸ್ಯರು ಪಾರಾಗಿದ್ದಾರೆ.

ಗ್ರಾಮದ ಪುಟ್ಟಸ್ವಾಮಿ ಮತ್ತು ರಾಧ ದಂಪತಿ ತಮ್ಮ ಮಗುವಿನ ಜೊತೆ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಲಗಿದ್ದ ರಾಧ ಅವರ ಕಾಲಿಗೆ ಬೆಂಕಿ ತಗುಲಿದಾಗ ಎಚ್ಚೆತ್ತು ಗುಡಿಸಿಲಿಗೆ ಬೆಂಕಿ ಬಿದ್ದಿರುವುದನ್ನು ಕಂಡು ಕೂಡಲೆ ತಮ್ಮ ಪತಿ ಮತ್ತು ಮಗುವನ್ನು ಹೊರಗೆ ಕರೆತಂದಿದ್ದಾರೆ. ಗ್ರಾಮಸ್ಥರನ್ನು ಕರೆತಂದು ಬೆಂಕಿ ನಂದಿಸುವ ವೇಳೆಗೆ ಗುಡಿಸಿಲಿನಲ್ಲಿದ್ದ ಆಹಾರ ಪದಾರ್ಥ, ಪಾತ್ರೆ, ಬಟ್ಟೆ, ₹5ಸಾವಿರ ನಗದು ಸೇರಿದಂತೆ ಎಲ್ಲ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.

‘ಬಡತನದಿಂದ ಬಳಲುತ್ತಿದ್ದ ಈ ಕುಟುಂಬ ವಾಸಿಸುತ್ತಿದ್ದ ಮನೆ ಸಂಪೂರ್ಣ ಶಿಥಿಲವಾಗಿತ್ತು. ಮನೆಯ ಸಮೀಪದಲ್ಲೆ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಪತಿ ಪುಟ್ಟಸ್ವಾಮಿ ಅನಾರೋಗ್ಯ ಪೀಡಿತರಾಗಿದ್ದು ಪತ್ನಿ ರಾಧ ಕೂಲಿ ಮಾಡಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ಗ್ರಾ.ಪಂ ವತಿಯಿಂದ ಮನೆ ಕೊಡಿಸಲು ಸರ್ಕಾರ ಮನೆಗಳನ್ನು ನೀಡಿಲ್ಲ, ಬೆಂಕಿ ಇವರ ಬದುಕನ್ನು ಕಸಿದು ಕೊಂಡಿದೆ. ತಾವು ವೈಯುಕ್ತಿಕವಾಗಿ ₹10 ಸಾವಿರ ನೆರವು ನೀಡಿದ್ದು ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತ ಕುಟುಂಬಕ್ಕೆ ನೆರವು ನೀಡಬೇಕು‘ ಎಂದು ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ಅತ್ನಿ ಹರೀಶ್ಮನವಿ ಮಾಡಿದರು.

ADVERTISEMENT

ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಹರೀಶ್‌ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರವಾಗಿ ₹5 ಸಾವಿರ ಮೊತ್ತದ ಚೆಕ್ಕನ್ನು ಸಂತ್ರಸ್ತ ಕುಟುಂಬಕ್ಕೆ ನೀಡಿದರು. ಪಿಡಿಒ ನಾಗರಾಜ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.