
ಶಿಕ್ಷಣ ಇಲಾಖೆಯ ಇಸಿಒ, ಸಿಆರ್ಪಿ ಕಾರಣ ಕೇಳಿ ನೋಟಿಸ್ | ದಾಖಲಾತಿ ಸರಿಯಾಗಿ ನಿರ್ವಹಿಸದ ಶಾಲೆ: ಮಾರ್ಗಸೂಚಿ ಉಲ್ಲಂಘನೆ | ಶಾಲಾ ವಾಹನದಲ್ಲಿ ಸಿಸಿಟಿವಿ ಇಲ್ಲ: ಆಯಾ ನೇಮಿಸದ ಶಾಲೆ
ಚನ್ನರಾಯಪಟ್ಟಣ: ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ರಕ್ಷಣೆ ನೀಡುವುದು ಮುಖ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಲಾ ವಾಹನ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಮಗುವಿಗೆ ಜನ್ಮ ನೀಡಿರುವ ವಿದ್ಯಾರ್ಥಿನಿ ಕಲಿಯುತ್ತಿರುವ ಖಾಸಗಿ ಶಾಲೆಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
1-7ನೇ ತರಗತಿಯವರೆಗೆ ಶಾಲಾ ದಾಖಲಾತಿ ಸರಿ ಇದೆ. ಆದರೆ ಪ್ರೌಢಶಾಲೆಯ ದಾಖಲೆ ಸಮರ್ಪಕವಾಗಿಲ್ಲ. ಶಾಲಾ ವಾಹನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ವಾಹನಕ್ಕೆ ಜಿಪಿಎಸ್ ವ್ಯವಸ್ಥೆ ಇಲ್ಲ. ವಾಹನದಲ್ಲಿ ಆಯಾ ನೇಮಿಸಿಲ್ಲ. ಒಟ್ಟಾರೆ ಕರ್ನಾಟಕ ಮೋಟರ್ ವಾಹನ ಕಾಯ್ದೆಯ ನಿಯಮ ಮತ್ತು ಸುಪ್ರೀಂ ಕೋರ್ಟ್ ರೂಪಿಸಿರುವ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗಿದೆ. ಇದರ ಬಗ್ಗೆ ಸಾರಿಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ನಿರ್ಲಕ್ಷ್ಯ ತೋರಿದ ಪರಿಣಾಮ ಶಾಲೆಯ ಮುಖ್ಯ ಶಿಕ್ಷಕ, ಸಂಸ್ಥೆಯ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಅದೇ ರೀತಿ ಶಾಲಾ ದಾಖಲಾತಿಗಳನ್ನು ಸಮರ್ಪಕವಾಗಿ ಪರಿಶೀಲಿಸುವಲ್ಲಿ ಶಿಕ್ಷಣ ಇಲಾಖೆಯ ಇಸಿಒ ಮತ್ತು ಸಿಆರ್ಪಿ ವಿಫಲರಾಗಿದ್ದಾರೆ. ಹಾಗಾಗಿ ಅವರಿಬ್ಬರಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು. ಶಾಲೆಗೆ ಸಂಬಂಧಿಸಿದ ಶೈಕ್ಷಣಿಕ ದಾಖಲೆಗಳನ್ನು ಗುರುವಾರದೊಳಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಸಲ್ಲಿಸಬೇಕು ಎಂದು ಡಿಡಿಪಿಐ ಬಲರಾಂ ಅವರಿಗೆ ಸೂಚಿಸಿದರು.
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಾಹನ ಚಾಲಕನ ವಿರುದ್ದ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೂಡಲೇ ಆತನನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಮಕ್ಕಳ ಚಲನವಲನದ ಕುರಿತು ಶಿಕ್ಷಕರು ಮತ್ತು ಪೋಷಕರು ಗಮನಹರಿಸಬೇಕು ಎಂದರು.
ಡಿಡಿಪಿಐ ಬಲರಾಂ, ಡಿವೈಎಸ್ಪಿ ಕುಮಾರ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಹಾಸನಕ್ಕೆ ಭೇಟಿ: ನಂತರ ಹಾಸನದ ಹಿಮ್ಸ್ಗೆ ಭೇಟಿ ನೀಡಿದ ಅವರು, ಅಧಿಕಾರಿಗಳು, ವೈದ್ಯರಿಂದ ಬಾಲಕಿಯ ಕುರಿತು ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.