ADVERTISEMENT

ಕೊರಮ-ಕೊರಚ ಅಭಿವೃದ್ದಿ ನಿಗಮಕ್ಕೆ ₹50 ಕೋಟಿ ಮೀಸಲಿಡಿ

ಕುಳುವ ಮಹಾಸಂಘದ ಜಿಲ್ಲಾಧ್ಯಕ್ಷ ಬಿ.ಆರ್. ಲೋಕೇಶ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 13:37 IST
Last Updated 21 ನವೆಂಬರ್ 2020, 13:37 IST
ಬಿ.ಆರ್. ಲೋಕೇಶ್
ಬಿ.ಆರ್. ಲೋಕೇಶ್   

ಹಾಸನ: ಕೊರಮ-ಕೊರಚ ಅಭಿವೃದ್ಧಿ ನಿಗಮಕ್ಕೆ ₹50 ಕೋಟಿ ಮೀಸಲಿಡಬೇಕು ಎಂದು ಅಖಿಲ ಕರ್ನಾಟಕ ಕುಳುವ
ಮಹಾಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್. ಲೋಕೇಶ್ ಒತ್ತಾಯಿಸಿದರು.

2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ನಿಗಮ ಸ್ಥಾಪಿಸಿ ₹5 ಕೋಟಿ ಅನುದಾನ ಘೋಷಿಸಿದ್ದರು. ಆದರೆ, ಆ ನಿಟ್ಟಿನಲ್ಲಿ ಇಲ್ಲಿವರೆಗೆ ಯಾವುದೇ ಪ್ರಗತಿಯಾಗಿಲ್ಲ. ಸಾಮಾಜಿಕ ನ್ಯಾಯದಡಿ ₹50 ಕೋಟಿ ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದಾದ್ಯಂತ 15 ಲಕ್ಷ ಜನಸಂಖ್ಯೆ ಇರುವ ಕೊರಮ-ಕೊರಚ ಸಮುದಾಯ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಜೀವನೋಪಾಯಕ್ಕಾಗಿ ಹಂದಿ ಸಾಕಾಣಿಕೆ, ಬುಟ್ಟಿ ಹೆಣೆಯುವುದು, ಹಗ್ಗ ನೇಯುವುದು, ಈಚಲು ಗರಿಗಳಿಂದ ಪೊರಕೆ ಕಟ್ಟುವುದು. ಹೀಗೆ ಇತರ ವೃತ್ತಿ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಮೂಲ ಸೌಕರ್ಯಕ್ಕಾಗಿ ನಡೆಸಿದ ನಿರಂತರ ಹೋರಾಟಕ್ಕೆ ಬೆಲೆ ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕೊರಮ-ಕೊರಚ ಅಭಿವೃದ್ಧಿ ಸ್ಥಾಪನೆ ಅವಶ್ಯಕತೆ ಇಲ್ಲವೆಂಬ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿ.ಎಸ್. ಯೋಗಿಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ.ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.