ಹಾಸನ: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಮಾನವ ಶರೀರ ರಚನೆ, ಕಾರ್ಯವೈಖರಿ, ಕಾಯಿಲೆ ಸಂದರ್ಭ ಶರೀರದ ಬದಲಾವಣೆ ಕುರಿತು ಪೂರ್ಣ ಮಾಹಿತಿ ಒದಗಿಸುವ ತಂತ್ರಾಂಶ ಆಧಾರಿತ ಬೋಧಕ ಯಂತ್ರ ಅನಾಟಮೇಜ್ ಟೇಬಲ್ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹ ರಾವ್ ತಿಳಿಸಿದರು.
ಆಸ್ಪತ್ರೆಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ಉಡುಪಿ, ಹಾಸನದ ಎಸ್ಡಿಎಂ ಆಯುರ್ವೇದ ಆಸ್ಪತ್ರೆಗಳಲ್ಲಿ ಈ ಯಂತ್ರಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಈ ತಂತ್ರಜ್ಞಾನದಿಂದ ಮಾನವ ದೇಹದ 5 ಪದರದ ಸ್ಕ್ಯಾನಿಂಗ್ ಮೂಲಕ ವೈದ್ಯಕೀಯ ಚಿಕಿತ್ಸೆ, ನೂನ್ಯತೆ, ಹಿಂದಿನ ರೋಗದ ಲಕ್ಷಣ ಸೇರಿದಂತೆ ದೈಹಿಕ ಸಮಸ್ಯೆಗಳ ಬಗ್ಗೆ ತಿಳಿಯಬಹುದಾಗಿದೆ. ಇದರಿಂದ ವೈದ್ಯರು ರೋಗಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಹಕಾರಿ ಆಗಲಿದೆ ಎಂದರು.
ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದ್ದು, ಧಾರ್ಮಿಕ ಪರಂಪರೆಯನ್ನು ಅಳವಡಿಸಿಕೊಂಡು ಆಯುರ್ವೇದ ಶಿಕ್ಷಣ ನೀಡುತ್ತಿದೆ. ವೈದ್ಯರಿಗೆ ಸಂಸ್ಕಾರ, ಮಾನವೀಯ ಗುಣಗಳು ಅವಶ್ಯಕವಾಗಿದೆ ಎಂದರು.
ಮಾಸ್ಕೊ ವಿಶ್ವವಿದ್ಯಾಲಯದ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅಲ್ಲಿ ಎಸ್ಡಿಎಂ ಆಯುರ್ವೇದ ಆಸ್ಪತ್ರೆಯ ಹೊರರೋಗಿ ವಿಭಾಗ ಕಾರ್ಯಾರಂಭ ಮಾಡಿದೆ. ಜಪಾನ್ನ ವಿಶ್ವವಿದ್ಯಾಲಯದಲ್ಲಿ ಎಸ್ಡಿಎಂ ಆಯುರ್ವೇದ ಆಸ್ಪತ್ರೆ ವತಿಯಿಂದ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಅನಾಟಮೇಜ್ ಯಂತ್ರದ ಉದ್ಘಾಟನೆ ಹಾಗೂ ಕಾಲೇಜಿನ 25 ನೇ ಘಟಿಕೋತ್ಸವ ಕಾರ್ಯಕ್ರಮ ಶನಿವಾರ (ಜು.25) ಜರುಗಲಿದೆ. ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವ ರವಿಕುಮಾರ್, ಡಾ.ಅಹಲ್ಯಾ ಶರ್ಮ, ಡಾ.ಮಮತಾ, ಡಾ. ಜಗದೀಶ್ ಪಾಲ್ಗೊಳ್ಳುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಶೈಲಜಾ, ಡಾ.ಉಮಾ ಗೋಪಾಲ್, ಡಾ.ಗುರುಬಸವರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.