ಹಳೇಬೀಡು: ಸರ್ಕಾರದಿಂದ ₹ 700 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲಾಗುತ್ತಿದ್ದು,. ಈಗಾಗಲೇ ₹ 350 ಕೋಟಿ ಕೆಲಸ ಮಾಡಲಾಗಿದೆ ಎಂದು ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿನ ಪುಷ್ಪಗಿರಿಯ ಸಭಾಂಗಣದಲ್ಲಿ ಭಾನುವಾರ ನಡೆದ ಮೈಸೂರು ವಿಭಾಗ ಮಟ್ಟದ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವೇಶ್ವರರು ಅನುಭವ ಮಂಟಪದ ಮೂಲಕ ಜಗತ್ತಿನಲ್ಲಿ ಮೊದಲ ಬಾರಿಗೆ ಸಂಸತ್ತಿನ ಪರಿಕಲ್ಪನೆ ಕೊಟ್ಟಿದ್ದಾರೆ. ಅವರ ಸಮಾನತೆಯ ತತ್ವವನ್ನು ಸಮಾಜಕ್ಕೆ ಸಾರುವ ನಿಟ್ಟಿನಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುತ್ತಿದ್ದೇವೆ. ಅನುಭವ ಮಂಟಪ ಜ್ಞಾನ ಕೇಂದ್ರವಾಗಿ ಹೊರಹೊಮ್ಮಲಿದೆ. ಇಷ್ಟಲಿಂಗ ಪೂಜೆ ನಿರಂತರವಾಗಿ ನಡೆಯಲಿದೆ ಎಂದರು.
ಅಂಗೈಯಲ್ಲಿ ಲಿಂಗ ಹಿಡಿದು ಪೂಜೆ ಮಾಡುವ ಪ್ರತಿಯೊಬ್ಬರು ಲಿಂಗಾಯತ, ವೀರಶೈವರಾಗಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಹಾಸನ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರ ಸಂಖ್ಯೆಯನ್ನು 1 ಲಕ್ಷಕ್ಕೆ ಏರಿಸುವ ಪ್ರಯತ್ನ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ಶಂಕರ ಬಿದರಿ ಮಾತನಾಡಿ, ವೀರಶೈವ ಲಿಂಗಾಯತ ಭಿನ್ನಾಭಿಪ್ರಾಯ ಇತ್ತೀಚೆಗಷ್ಟೆ ಆರಂಭವಾಗಿದೆ. ಭಿನ್ನಾಭಿಪ್ರಾಯ ಹೋಗಲಾಡಿಸಿ, ಎಲ್ಲ ಪಂಗಡಗಳು ಒಂದಾಗಿ ಮುನ್ನಡೆಯಬೇಕು. ಕೆಲವು ಮಠಾಧೀಶರು ಲಿಂಗಾಯತ, ವೀರಶೈವ ಬೇರೆ ಎನ್ನುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದಲ್ಲಿಯೂ ವೀರಶೈವ ಲಿಂಗಾಯತ ಸಮಾಜದ ಸಾಮಾನ್ಯರು ಭಿನ್ನಾಭಿಪ್ರಾಯ ಇಲ್ಲದೇ ಬದುಕುತ್ತಿದ್ದಾರೆ. ಕೆಲವೇ ಮಂದಿಯ ಭಿನ್ನಾಭಿಪ್ರಾಯಕ್ಕೆ ಯಾರೂ ಕಿವಿಗೊಡಬಾರದು ಎಂದು ಸಲಹೆ ನೀಡಿದರು.
ತಮಗೆ ಬೇಕಾದ ಯಾತ್ರಾಸ್ಥಳಕ್ಕೆ ಯಾವಾಗ ಬೇಕಾದರೂ ಹೋಗಿ, ಮನಸ್ಸನ್ನು ಶುದ್ದಿ ಮಾಡಿಕೊಳ್ಳಿ. ಆದರೆ ಸಮಾಜವನ್ನು ಮಾತ್ರ ಒಡೆಯಬೇಡಿ. ಜಗತ್ತಿನ ಜನಸಂಖ್ಯೆಯಲ್ಲಿ ವೀರಶೈವ ಲಿಂಗಾಯತರು ಅತಿ ಕಡಿಮೆ ಸಂಖ್ಯೆಯಲ್ಲಿದ್ದೇವೆ ಎಂದು ಹೇಳಿದರು.
ದೊಡ್ಡಮಠದ ಮಲ್ಲಿಕಾರ್ಜುನ ಸ್ವಾಮೀಜಿ, ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪುಷ್ಪಗಿರಿ ಮಠದ ಆಡಳಿತಾಧಿಕಾರಿ ಚಟಚಟ್ಟಿಹಳ್ಳಿ ಕಿಟ್ಟಪ್ಪ, ವಿರಶೈವ ಲಿಂಗಾಯತ ಮಹಾಸಭಾ ಪ್ರಮುಖರಾದ ಸಾಗರನಹಳ್ಳಿ ನಟರಾಜ್, ವೀಣಾ ಕಾಶಂಪೂರ್, ವಿಕ್ರಂಕೌರಿ, ಗ್ರಾನೈಟ್ ರಾಜಶೇಖರ್, ಸಿ.ಎಂ.ನಿಂಗರಾಜ್, ಎ.ಎಸ್.ಬಸವರಾಜು, ಎಚ್.ಸಿ.ಚೇತನ್, ಗೆಂಡೇಹಳ್ಳಿ ಚೇತನ್, ಅದ್ದೂರಿ ಕುಮಾರ್ ಭಾಗವಹಿಸಿದ್ದರು. ಸಾಗರ ಹಳ್ಳಿ ನಟರಾಜ್ ನಿರ್ಣಯ ಮಂಡಿಸಿದರು.
ಪುಷ್ಪಗಿರಿಯಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾ ವಿಭಾಗ ಕಾರ್ಯಾಗಾರ ಒಗ್ಗಟ್ಟಿನ ಪ್ರತೀಕ. ಸಮಾಜದ ಅಭಿವೃದ್ಧಿಗೆ ನಾಂದಿ ಹಾಡಿದಂತಾಗಿದೆ.ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪುಷ್ಪಗಿರಿ ಮಠ
ಆನೆ ನಿಯಂತ್ರಣಕ್ಕೆ ಕ್ರಮ
ವನ್ಯಜೀವಿ ಮಾನವ ಸಂಘರ್ಷ ಅನಾದಿ ಕಾಲದಿಂದ ನಡೆಯುತ್ತಿದೆ. ವನ್ಯಜೀವಿ ಸಂರಕ್ಷಣೆ ನಮ್ಮ ಹೊಣೆಯಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ಮಾನವ ಜೀವ ಉಳಿಸುವುದು ಪ್ರಮುಖ ಕೆಲಸ. ವನ್ಯಜೀವಿ ದಾಳಿಯಿಂದ ಆಗುವ ಸಾವಿನ ಪ್ರಮಾಣವನ್ನು ಶೇ 45ಕ್ಕೆ ಇಳಿಸಲಾಗಿದೆ. ಆನೆ ನಿಯಂತ್ರಣಕ್ಕೆ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ. ಕಂದಕಗಳನ್ನು ನಿರ್ಮಿಸಲಾಗಿದೆ. ಆನೆ ಕಾರ್ಯಪಡೆ ಕಾರ್ಯ ನಿರ್ವಹಿಸುತ್ತಿದೆ. ಡ್ರೋನ್ ಮೂಲಕ ಆನೆ ಚಲನವಲನ ಗಮನಿಸಲಾಗುತ್ತಿದೆ ಎಂದು ತಿಳಿಸಿದರು. ಕೊಡಗಿನಲ್ಲಿ 114 ಹಾಸನ ಜಿಲ್ಲೆಯಲ್ಲಿ 60 ರಿಂದ 80 ಆನೆಗಳು ಊರು ಸೇರಿಕೊಂಡಿವೆ ಹಾಸನದಿಂದ ಮೂಡುಗೆರೆ ಕಡೆಗೆ ಆನೆ ಓಡಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ ಎಂದು ಸಚಿವರು ಹಾಸ್ಯ ಮಾಡಿದರು.
ಕಾರ್ಯಾಗಾರದ ನಿರ್ಣಯ
ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಎಲ್ಲ ಘಟಕಗಳನ್ನು ಪುನರುಜ್ಜೀವನಗೊಳಿಸಬೇಕು.
ಪ್ರತಿ ಘಟಕದಿಂದಲೂ ಪದಾಧಿಕಾರಿಗಳ ಕಾರ್ಯಾಗಾರ ನಡೆಸಬೇಕು.
ಜಾತಿ ಗಣತಿಯಲ್ಲಿ ಮಹಾಸಭಾದ ಆಶಯದಂತೆ ಬರೆಯಿಸಬೇಕು.
ಸಮಾಜಕ್ಕೆ ಮೀಸಲಿರುವ ಸರ್ಕಾರದ ಸೌಲಭ್ಯಗಳನ್ನು ಮಹಾಸಭಾದಿಂದ ಅರ್ಹರಿಗೆ ತಲುಪಿಸಬೇಕು.
ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಅಭ್ಯರ್ಥಿಗಳಿಗೆ ಸ್ಥಾನ ದೊರಕುವಂತೆ ಮಹಾಸಭಾ ನೋಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.