ADVERTISEMENT

ಕಟ್ಟೆಪುರ ಏತ ನೀರಾವರಿ ಕಾಮಗಾರಿ ವಿಳಂಬ: ಮಂಜು ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 5:22 IST
Last Updated 9 ಜನವರಿ 2026, 5:22 IST
ಅರಕಲಗೂಡು ತಾಲ್ಲೂಕು ಕಟ್ಟೇಪುರ ಏತ ನೀರಾವರಿ ಕಾಮಗಾರಿಯನ್ನು ಶಾಸಕ ಎ. ಮಂಜು ಮಂಗಳವಾರ ವೀಕ್ಷಿಸಿದರು
ಅರಕಲಗೂಡು ತಾಲ್ಲೂಕು ಕಟ್ಟೇಪುರ ಏತ ನೀರಾವರಿ ಕಾಮಗಾರಿಯನ್ನು ಶಾಸಕ ಎ. ಮಂಜು ಮಂಗಳವಾರ ವೀಕ್ಷಿಸಿದರು   

ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ಕಟ್ಟೆಪುರ ಏತ ನೀರಾವರಿ ಯೋಜನೆಯ ಕಾಮಗಾರಿ ವಿಳಂಬ ಕುರಿತು ಶಾಸಕ ಎ. ಮಂಜು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ‘ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ, ರೈತರ ಹಿತವನ್ನು ಕಡೆಗಣಿಸಿ ನಿರ್ಲಕ್ಷ್ಯ ವಹಿಸಿದರೆ ಸಹಿಸಲಾಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಲುವೆ ನಿರ್ಮಾಣಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರಧನ ದೊರಕದ ಬಗ್ಗೆ ರೈತರು ಪ್ರಸ್ತಾಪಿಸಿದಾಗ, ಅರ್ಹ ರೈತರಿಗೆ ಶೀಘ್ರವಾಗಿ ಪರಿಹಾರ ಕೊಡಿಸುವ ಜವಾಬ್ದಾರಿಯನ್ನು ನಾನು ವಹಿಸುತ್ತೇನೆ ಎಂದು ಹೇಳಿದರು.

ADVERTISEMENT

ಪೈಪ್‌ಲೈನ್ ಅಳವಡಿಸುವ ಸಂದರ್ಭದಲ್ಲಿನ ಗಿಡಮರ ನಾಶಕ್ಕೆ ಸಂಬಂಧಿಸಿದಂತೆ ಸಮರ್ಪಕ ಅಂದಾಜು ಪಟ್ಟಿ ತಯಾರಿಸಿ, ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅರಕಲಗೂಡಿನಲ್ಲಿ ಶೀಘ್ರ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿ ವಿಳಂಬದ ಕುರಿತು ಚರ್ಚಿಸಲಾಗುವುದು. ಮುಂದಿನ 2–3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. 78 ಕಿ.ಮೀ ಉದ್ದದ ವಿತರಣಾ ಲೈನ್‌ನಲ್ಲಿ ಈಗಾಗಲೇ 70 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ, ಬಾಕಿ ಇರುವ 8 ಕಿ.ಮೀ ಕೆಲಸವನ್ನು ಶೀಘ್ರ ಪೂರ್ಣಗೊಳಿಸಿ ಕೆರೆಕಟ್ಟೆ, ಬೈಸೂರು, ಬಾಗ್ದಾಳು, ಶಿರದನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಸೂಚಿಸಿದರು.

ಹಾರಂಗಿ ವಿಭಾಗದ ಕಾರ್ಯನಿರ್ವಾಹಕ ‌ಎಂಜಿನಿಯರ್ ಪುಟ್ಟಸ್ವಾಮಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದೀಪಕ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.