
ಅರಸೀಕೆರೆ: ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯ ದೃಷ್ಟಿಯಿಂದ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ₹6 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಂತರ ಮಾತನಾಡಿದ ಅವರು, ಕ್ರೀಡಾಪಟುಗಳಿಗೆ ಉತ್ತೇಜನ ಹಾಗೂ ಜನಸಾಮಾನ್ಯರ ಸದೃಢ ಆರೋಗ್ಯದ ದೃಷ್ಟಿಯಿಂದ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಷಟಲ್ ಬ್ಯಾಡ್ಮಿಂಟನ್, ಕೇರಂ, ಟೇಬಲ್ ಟೆನಿಸ್ ಸೇರಿದಂತೆ ಹತ್ತು ಹಲವು ಆಟೋಟ ಅಡುವುದರಿಂದ ಮನಸ್ಸು ಶಾಂತತೆ ಹಾಗೂ ದೇಹದ ಆರೋಗ್ಯ ಸುಧಾರಿಸುತ್ತದೆ. ನಗರದ ಜನತೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಿಶೇಷ ಅನುದಾನದ ಮೂಲಕ ವಿದ್ಯುತ್ ವಾಹಕ ಬದಲಾವಣೆ, ಯುಜಿಡಿ ಸಮಸ್ಯೆ, ಕುಡಿಯುವ ನೀರು, ಉತ್ತಮ ರಸ್ತೆ ಸೇರಿದಂತೆ ಎಲ್ಲ ಮೂಲಸೌಕರ್ಯ ಒದಗಿಸುವ ಕೆಲಸಗಳನ್ನು ಮಾಡಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಆಗದೆ ಇರುವ ಕಾಮಗಾರಿಗಳು ಅರಸೀಕೆರೆ ಕ್ಷೇತ್ರದಲ್ಲಿ ಆಗಿವೆ. ₹38 ಕೋಟಿ ವೆಚ್ಚದಲ್ಲಿ ಗೀಜಿಹಳ್ಳಿ ಸಮೀಪ ಕಾರ್ಮಿಕರ ಮಕ್ಕಳಿಗೆ ಯುಕೆಜಿಯಿಂದ ಕಾಲೇಜು ಹಂತದವರೆಗೆ ವಸತಿ ಶಾಲೆಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ ಮಾತನಾಡಿ, ಶಾಸಕರ ಕಾಳಜಿಯಿಂದ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು, ಇವರ ನೇತೃತ್ವದಲ್ಲಿ ಅರಸೀಕೆರೆ ಅಭಿವೃದ್ದಿ ಪಥದತ್ತ ಹೋಗುತ್ತಿದೆ. ಕಾಣದ ಕೈಗಳು ಅಪಪ್ರಚಾರ ಮಾಡುತ್ತಿದ್ದು, ಅವುಗಳಿಗೆಲ್ಲ ಜನತೆ ಕಿವಿಗೊಡಬಾರದು. ಎಂದಿಗೂ ನಿಮ್ಮ ಜೊತೆ ಸದಾ ಇರುತ್ತೇವೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್ ಮಾತನಾಡಿ, ಆನೆ ಮುಂದೆ ಮುಂದೆ ಹೋದಂತೆ ನಾಯಿಗಳು ಹಿಂದೆ ಬೊಗಳುತ್ತಿರುತ್ತಿವೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು. ಶಾಸಕರ ಅಭಿವೃದ್ಧಿ ಕೆಲಸಗಳೇ ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕೆಪಿಸಿಸಿ ಕಾರ್ಯದರ್ಶಿ ಶಶಿಧರ್, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್ ಮಾತನಾಡಿದರು. ಜಿಲ್ಲಾ ಕ್ರೀಡಾ ಅಧಿಕಾರಿ ಆನಂದಮೂರ್ತಿ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಜಾಜೂರು ಸಿದ್ದೇಶ್, ಸಿರಾಜ್, ಮಂಜಣ್ಣ, ವಿರೂಪಾಕ್ಷ, ಆರೋಗ್ಯ ಸಮಿತಿ ಸದಸ್ಯೆ ರೇಖಾ, ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ವೈ.ಕೆ. ದೇವರಾಜು, ದಿಶಾ ಸಮಿತಿ ಸದಸ್ಯೆ ಮಂಜುಳಾಬಾಯಿ, ಮುಖಂಡರಾದ ರುಕ್ಮಿಣಿ ಜಯಕುಮಾರ್, ಕಾಟೀಕೆರೆ ಉಮೇಶ್, ಮುರುಂಡಿ ಶಿವಯ್ಯ, ಮೊಬೈಲ್ ದರ್ಶನ್, ಬಾಲಮುರುಗನ್, ಮನು, ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಯಣ್ಣ, ಸರ್ಕಲ್ ಇನ್ಸ್ಪೆಕ್ಟರ್ ಗೋಪಿ, ಗುತ್ತಿಗೆದಾರ ಮುರುಳಿ ಇನ್ನಿತರರು ಇದ್ದರು.
ಕನಕಪುರದಲ್ಲಿ ಕನಕೋತ್ಸವ ತಿಪಟೂರಿನಲ್ಲಿ ಕಲ್ಪತರು ಹಬ್ಬದಂತೆ ಅರಸೀಕೆರೆಯಲ್ಲಿ ಮುಂದಿನ ವರ್ಷ ಅರಸೀ ಹಬ್ಬವನ್ನು ವಿಶಿಷ್ಟವಾಗಿ ಆಯೋಜಿಸುವ ಕುರಿತು ಚಿಂತನೆ ಮಾಡಲಾಗಿದೆ
–ಕೆ.ಎಂ. ಶಿವಲಿಂಗೇಗೌಡ ಶಾಸಕ
ಕ್ಷೇತ್ರದ ಏಳ್ಗೆಗೆ ಶ್ರಮಿಸುವೆ ಚುನಾವಣೆ ಬಂದಾಗ ಚುನಾವಣೆ ಮಾಡೋಣ. ಅಲ್ಲಿಯತನಕ ಕ್ಷೇತ್ರದ ಏಳಿಗೆಗಾಗಿ ಶ್ರಮಿಸುವೆ. ನಾವು ಮಾಡಿದ ಕೆಲಸಗಳು ನಮ್ಮನ್ನು ಗುರುತಿಸುತ್ತವೆ. ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಬೇಕು ಎಂದು ಹೇಳುತ್ತಾರೆ. ಆದ್ದರಿಂದ ಕ್ಷೇತ್ರದ ಅಭಿವೃದ್ದಿಯೇ ನನ್ನ ಮೂಲಮಂತ್ರವಾಗಿದೆ ಎಂದು ಶಿವಲಿಂಗೇಗೌಡ ಹೇಳಿದರು. ಅಪಪ್ರಚಾರ ಆರೋಪಗಳು ಹಾಗೂ ಇಲ್ಲಸಲ್ಲದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತಿದ್ದು ದುರುಪಯೋಗ ಪಡಿಸುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ವ್ಯವಸ್ಥೆಗಳಿಗೆ ಕಡಿವಾಣ ಹಾಕಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.