
ಹೊಳೆನರಸೀಪುರ: ‘ನಮ್ಮ ಭಾರತೀಯ ಚಿತ್ರಕಲೆಗೆ ಲಕ್ಷಾಂತರ ರೂಪಾಯಿ ಬೆಲೆ ಇದೆ. ವಿದೇಶದಲ್ಲಿ ನಮ್ಮ ಭಾರತೀಯ ಚಿತ್ರಕಲೆಗಳು ಕೋಟಿ ಬೆಲೆಗೆ ಮಾರಾಟ ಆಗಿರುವ ಉದಾಹರಣೆಗಳಿದೆ. ಆದ್ದರಿಂದ ಚಿತ್ರಕಲೆಯನ್ನು ನಿರ್ಲಕ್ಷಿಸದೆ ಆಸಕ್ತಿಯಿಂದ ಕಲಿಯಿರಿ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಹೇಳಿದರು.
ಸರ್ಕಾರಿ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಜನಮಿತ್ರ, ಗುರುಗಣೇಶ್ ಚಿಟ್ಸ್(ರಿ) ಪ್ರೈವೇಟ್ ಲಿಮಿಟೆಡ್ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
‘ಇಂದಿನ ದಿನದಲ್ಲಿ ಸರ್ಕಾರಿ ಶಾಲೆಗಳಿಗೆ ಸಹಾಯ ಸಹಕಾರ ನೀಡಿ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರೋತ್ಸಾಹಿಸಲು ಸಂಘ ಸಂಸ್ಥೆಗಳು ಮುಂದೆ ಬರುತ್ತಿದೆ. ಇಂತಹ ಸಹಕಾರಗಳನ್ನು ಪಡೆದು ಅವಕಾಶವನ್ನು ಬಳಿಸಿಕೊಂಡು ಬೆಳೆಯಿರಿ’ ಎಂದರು.
ಉಪಪ್ರಾಂಶುಪಾಲ ಕಾಳೇಗೌಡ ಮಾತನಾಡಿ, ‘ನಮ್ಮ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಇನ್ನೂ ಉತ್ತಮ ಫಲಿತಾಂಶ ತಂದು ಕೊಡಲು ನಮ್ಮ ಶಿಕ್ಷಕರೆಲ್ಲಾ ಶ್ರಮಿಸುತ್ತಿದ್ದಾರೆ’ ಎಂದರು.
ಚಿತ್ರಕಲಾ ಸ್ಪರ್ಧೆಯಲ್ಲಿ ದೊಡ್ಡಳ್ಳಿ ಸರ್ಕಾರಿ ಪ್ರೌಢಶಾಲೆಯ ದಿವ್ಯಾ ಪ್ರಥಮ ಸ್ಥಾನ ಪಡೆದು ₹2 ಸಾವಿರ ನಗದು ಬಹುಮಾನ, ಸರ್ಕಾರಿ ಪದವಿಪೂರ್ವ ಮಹಿಳಾ ಕಾಲೇಜಿನ ದಿವ್ಯಾ ದ್ವಿತೀಯ ಸ್ಥಾನ, ₹1500 ಬಹುಮಾನ, ಗ್ರೀನ್ವುಡ್ ಆಂಗ್ಲ ಮಾಧ್ಯಮ ಶಾಲೆಯೆ ನಿಕ್ಷೇಪ್ ತೃತೀಯ ಸ್ಥಾನ ₹1 ಸಾವಿರ ನಗದು ಬಹುಮಾನ, ದೊಡ್ಡಳ್ಳಿ ಶಾಲೆಯ ನವ್ಯಾ, ಹರದನಹಳ್ಳಿ ಎಂ.ಡಿ.ಆರ್.ಎಸ್ ಶಾಲೆಯ ಮೋಕ್ಷಿತಾ, ಗ್ರೀನ್ವುಡ್ಶಾಲೆಯ ಹರ್ಷಾ ₹500 ನಗದು ಸಮಾಧಾನಕರ ಬಹುಮಾನ ಪಡೆದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಸುದರ್ಶನ್, ಚಿತ್ರಕಲಾ ಶಿಕ್ಷಕ ಚಂದ್ರಶೇಖರ್, ಜಯರಾಂ, ಉದ್ಯಮಿ ಜೈಪ್ರಕಾಶ್, ಮಣಿಕಂಠ, ಚಿಟ್ಸ್ ಸಂಸ್ಥೆಯ ಸುರೇಶ್ಕುಮಾರ್, ರಾಮಚಂದ್ರಪ್ಪ, ಸುಜತ್ಅಲಿ, ಆನಂದ್ ಇದ್ದರು. ಶಿಕ್ಷಕ ರವಿಶಂಕರ್ ಮೂರ್ತಿ ಕಾಯಕ್ರಮ ನಿರೂಪಿಸಿದರು. ವಿದ್ಯಾ, ಬೃಂದಾ ಕಾರ್ಯಕ್ರಮಕ್ಕೆ ಶುಭ ಕೋರಿದರು. ಶಿಕ್ಷಕ ಪಾಲಾಕ್ಷ ಸ್ವಾಗತಿಸಿದರು. ಶಿಕ್ಷಕಿ ಪದ್ಮಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.