ಬೇಲೂರು: ಶ್ರೀಚನ್ನಕೇಶವ ದೇವರ ಅಶ್ವಾರೋಹಣೋತ್ಸವ ಮತ್ತು ಸಾಂಪ್ರದಾಯಿಕ ಮೊಲ ಬಿಡುವ ಮೂಲಕ ಬೇಲೂರಿನಲ್ಲಿ ಗುರುವಾರ ಸಂಜೆ ಸಂಕ್ರಾಂತಿ ಆಚರಿಸಲಾಯಿತು.
ದೇವಾಲಯದಿಂದ ಇಲ್ಲಿನ ನೆಹರೂನಗರಕ್ಕೆ ಮಂಗಳ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಉತ್ಸವ ಸಾಗಿ ಹಳೇಬೀಡು ರಸ್ತೆಯಲ್ಲಿ ಹಾಕಲಾಗಿದ್ದ ವಿಶೇಷ ಚಪ್ಪರದವರೆಗೆ ತಲುಪಿತು.
ವಿಜಯನಗರ ಅರಸರ ಕಾಲದಲ್ಲಿ ಉತ್ತರಾಯಣ ಪುಣ್ಯಕಾಲದಲ್ಲಿ ಆರಂಭವಾದ ಈ ಉತ್ಸವ ಇಂದಿಗೂ ಆಚರಣೆಯಲ್ಲಿದೆ. ಪ್ರತಿ ವರ್ಷ ಸಂಕ್ರಾಂತಿಯಂದು ಮೊಲವನ್ನು ಕಾಡಿನಿಂದ ಜೀವಂತವಾಗಿ ಬೇಟೆಯಾಡಿಕೊಂಡು ತಂದು ದೇವರ ಎದುರು ಪೂಜೆ ಸಲ್ಲಿಸಿ ಮತ್ತೆ ಕಾಡಿಗೆ ಬಿಡುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ಮೊಲವನ್ನು ಬಿಟ್ಟ ನಂತರ ಶ್ರೀಚನ್ನಕೇಶವ ಉತ್ಸವ ಮೂರ್ತಿಯ ಅಶ್ವಾರೋಹಣೋತ್ಸವ ನಡೆಯುತ್ತದೆ.
ಸಮೀಪದ ದೊಡ್ಡಬ್ಯಾಡಿಗೆರೆ ಪರ್ವತಯ್ಯ ಈ ಬಾರಿ ಮೊಲವನ್ನು ಹಿಡಿದು ತಂದಿದ್ದರು. ಪೂಜಾ ಕಾರ್ಯವನ್ನು ಮುಖ್ಯಅರ್ಚಕ ಕೃಷ್ಣಸ್ವಾಮಿಭಟ್, ಶ್ರೀನಿವಾಸ್ಭಟ್ ಇತರೆ ಅರ್ಚಕರ ಸಮೂಹ ನಡೆಸಿದರು.
ದೇಗುಲದ ಕಾರ್ಯ ನಿರ್ವಹಣಾಧಿಕಾರಿ ವಿದ್ಯುಲ್ಲತಾ, ಶಿರಸ್ತೇದಾರ್ ನಾಗರಾಜ್, ಆರ್.ಐ. ಪ್ರಕಾಶ್ ಹಾಗೂ ದೇಗುಲ ಸಮಿತಿಯ ಮಾಜಿ ಸದಸ್ಯರು, ಭಕ್ತರು ಇತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.