ಬೇಲೂರು: ಇಲ್ಲಿನ ಚನ್ನಕೇಶವಸ್ವಾಮಿ ದಿವ್ಯ ರಥೋತ್ಸವವು ಶುಕ್ರವಾರ ಅದ್ದೂರಿಯಾಗಿ ನೆರವೇರಿತು. ಸಾವಿರಾರು ಭಕ್ತರ ಕಣ್ತುಂಬಿಕೊಂಡರು.
ಮಧ್ಯಾಹ್ನ ವಿಷ್ಣುಸಮುದ್ರ ಕಲ್ಯಾಣಿ ಸಮೀಪದಲ್ಲಿ ದೇಗುಲಕ್ಕೆ ಸಂಬಂಧಿಸಿದ ನಾಡಪಟೇಲರು, ದೇವರತನದ ಪಟೇಲರು ಹಾಗೂ ವಿವಿಧ ಗ್ರಾಮಗಳ ಪಟೇಲರನ್ನು, ದೇಗುಲದ ಆಡಳಿತ ಮಂಡಳಿಯ ನೇತೃತ್ವದಲ್ಲಿ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ರಥದವರೆಗೂ ಕರೆತರಲಾಯಿತು. ನಾಡ ಪಟೇಲರು ಮಂಗಳವಾದ್ಯದೊಂದಿಗೆ ಗೌರವವಂದನೆ ಸ್ವೀಕರಿಸಿ, ದೇವರಿಗೆ ಪೂಜೆ ಸಲ್ಲಿಸುವ ಮೂಲಕ ದಿವ್ಯರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಗೋವಿಂದ ನಾಮಸ್ಮರಣೆ ಪಠಿಸುತ್ತ ರಥ ಎಳೆದರು.
ಭಕ್ತರು ರಥದ ಮೇಲೆ ಬಾಳೆಹಣ್ಣು, ಧವನ ಹಾಗೂ ಕಾಳುಮೆಣಸು ಎಸೆದರು. ರಥವನ್ನು ದೇಗುಲದ ಮೂರು ದಿಕ್ಕುಗಳಲ್ಲೂ ಎಳೆದು, ಮೂಲ ಸ್ಥಾನಕ್ಕೆ ತಂದು ನಿಲ್ಲಿಸಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ಪ್ರಧಾನ ಆರ್ಚಕ ಶ್ರೀನಿವಾಸಭಟ್, ನರಸಿಂಹಪ್ರಿಯ ಭಟ್ ಪೂಜೆಯ ನೇತೃತ್ವ ವಹಿಸಿದ್ದರು.
ಸುಡುವ ಬಿಸಿಲನ್ನು ಲೆಕ್ಕಿಸದೇ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ನೂಕುನುಗ್ಗಲು ಇತ್ತು. ಸಂಘ, ಸಂಸ್ಥೆಗಳವರು ಮಜ್ಜಿಗೆ, ಕಲ್ಲಗಂಡಿಹಣ್ಣು, ಅನ್ನಸಂತರ್ಪಣೆ ಮಾಡಿದರು. ಕಸವನ್ನು ಪೌರಕಾರ್ಮಿಕರು ತೆರವುಗೊಳಿಸಿದರು.
‘ಎಲ್ಲರ ಸಹಕಾರದಿಂದ ರಥೋತ್ಸವ ಅಚ್ಚುಕಟ್ಟಾಗಿ ನಡೆದಿದೆ. ಭಗವಂತನ ಸೇವೆ ಮಾಡಲು ನನಗೂ ಒಂದು ಅವಕಾಶ ಸಿಕ್ಕಿದ್ದು ಸಂತೋಷ ತಂದಿದೆ. ಚನ್ನಕೇಶವ ಹಾಗೂ ಮಹಾಲಕ್ಷ್ಮಿ ದೇವಿ ನಾಡಿನ ಜನತೆಗೆ ಒಳಿತು ಮಾಡಲಿ’ ಎಂದು ದೇಗುಲದ ಆಡಳಿತಾಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಹೇಳಿದರು.
ಶಾಸಕ ಎಚ್.ಕೆ. ಸುರೇಶ್, ದೇಗುಲದ ಆಡಳಿತಾಧಿಕಾರಿ ಕೆ.ಟಿ. ಶಾಂತಲಾ, ತಹಶೀಲ್ದಾರ್ ಎಂ.ಮಮತಾ, ಕಾರ್ಯನಿರ್ವಾಹಕ ಅಧಿಕಾರಿ ಯೋಗೀಶ್, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ , ಸಾವಿರಾರು ಭಕ್ತರು ಭಾಗವಹಿಸಿದ್ದರು.
Quote - ದೇಶಕ್ಕೆ ಉತ್ತಮ ಮಳೆ–ಬೆಳೆಯಾಗಲಿ. ಸ್ವಚ್ಛ ಪರಿಸರ ಮುಂದಿನ ಪೀಳಿಗೆಗೆ ಉಳಿಯಲಿ. ಅದನ್ನು ಉಳಿಸಲು ಪ್ರತಿಯೊಬ್ಬರೂ ಗಿಡ ನೆಟ್ಟು ಪೋಷಿಸಿ. ಸಾಲುಮರದ ತಿಮ್ಮಕ್ಕ ರಾಜ್ಯ ಪರಿಸರ ರಾಯಭಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.